Sunday 19 October 2014

ಮತ್ತೆ ಬಂದಳು ಮಧುಶಾಲಾ!!!



 
 ಭಾವುಕತಾ ಕಿ ಅಂಗೂರ್ ಲತಾ ಸೆ
ಖೀಂಚಕರ್ ಲಾಯಾ ಹೂಂ ಏ ಹಾಲಾ
ಕೋಯಿ ಲಾಖ ಪೀಯೆ, ದೋ ಲಾಖ ಪೀಯೆ
ಕಭೀ ಖಾಲಿ ನ ಹೋಗಿ ಪ್ಯಾಲಾ. . . .
      ಹೆಣ್ಣು ಮುಟ್ಟಿ, ಹೆಣ್ಣು ಹೆತ್ತು, ಕಾವ್ಯ ಕಲಿಸಿ-ಕುಡಿದು, ಕಳೆದ ಎರಡು ದಶಕಗಳಿಂದ ಅದರ ಜೊತೆ ಜೊತೆಯಲ್ಲಿಯೇ ನಡೆದು, ಸಿಕ್ಕ ಸಭೆಗಳಲ್ಲೆಲ್ಲಾ ಅದನ್ನು ಕುರಿತು ಮಾತನಾಡುವಾಗಲೆಲ್ಲ ನಾನು ಮತ್ತೆ ಮತ್ತೆ ಉದ್ಧರಿಸುವ ನನ್ನ ತಂದೆ ಕಲಿಸಿದ ಪದ್ಯ ಇದು. ಕವಿ ಹರಿವಂಶರಾಯ್ ಇಡಿಯಾಗಿ ಆವರಿಸಿಕೊಳ್ಳಲು ಕಾರಣವಾದ ಪದ್ಯ ಇದು. ಕುಡುಕರು, ಅವರ ತಲೆ ನೇವರಿಸಿ ಎದೆಯುಲ್ಲಿ ಇಂಗಿಸಿಕೊಳ್ಳುವ ಹೆಂಗಸರು ಮತ್ತು ಅವರೊಳಗಿನ ಪದರುಗಳನ್ನು ಬಿಡಿ ಬಿಡಿಯಾಗಿ ನೋಡುವ ಒಳದೃಷ್ಠಿಯನ್ನು ಕೊಟ್ಟ ಪದ್ಯ ಇದು. ಸಂತರನ್ನು, ಲಫಂಗರನ್ನು ಮತ್ತು ಹುಚ್ಚರನ್ನೂ ಮನಸಾರೆ ಹಚ್ಚಿಕೊಂಡು ಮನುಷ್ಯರಂತೆ ಪರಿಗಣಿಸುವ ಪಾಠ ಕಲಿಸಿದ ಪದ್ಯ ಇದು. ನೋಡೊಣ, ಇದನ್ನು ಭಾಷಾಂತರಿಸೋಣ ಎಂದು ಹಠಕ್ಕೆ ಬಿದ್ದೆ. ಶಬ್ದ ಹೊಂದಿದವು, ಮಾಧುರ್ಯ ತರಲಾಗಲಿಲ್ಲ. ಹಿಗೆಂದುಕೊಂಡೆ -
ಭಾವ-ಮದುವನದ
ಮದಿರೆಯನು ಕಸಿದು ತಂದಿದ್ದೇನೆ
ಯಾರೆಷ್ಟೇ ಕುಡಿದರೂ, ತುಟಿ ಕಚ್ಚಿ ಎಳೆದರೂ
ಖಾಲಿಯಾಗದು ಪ್ಯಾಲೆ ಎಂದು ನಂಬಿದ್ದೇನೆ 
       ಇದು ಹರಿವಂಶರಾಯ್. ನನ್ನ ಓದಿನ ಮಿತಿಯಲ್ಲಿ ಹೇಳುವುದಾದರೆ, ಅವರ ಪದ್ಯಗಳನ್ನಷ್ಟೇ ಅಲ್ಲ, ಅವರ ಗದ್ಯವನ್ನೂ ಕೂಡ ಭಾಷಾಂತರಿಸಲಾಗದು. ನೀವು ನಿಜವಾಗಿಯೂ ಕಾವ್ಯದ ಹುಚ್ಚು ಹಿಡಿಸಿಕೊಂಡಿದ್ದರೆ ಬಚ್ಚನ್‍ರ ಆತ್ಮಕತೆ ‘ಕ್ಯಾ ಭೂಲೂಂ ಕ್ಯಾ ಯಾದ ಕರೂಂ’ ಓದಲೇಬೇಕು. ನಾಲ್ಕು ಭಾಗಗಳಲ್ಲಿದೆ. ಇಡಿಯಾಗಿ ಓದಲಾಗದಿದ್ದರೂ ಚಿಂತೆಯಿಲ್ಲ, ಅವರ ಆತ್ಮಕತೆಯ ಮೊದಲ ಮತ್ತು ಕೊನೆಯ ಭಾಗಗಳನ್ನು ಓದಲೇಬೇಕು. ಮದಿರೆ, ಮಧುಶಾಲಾರನ್ನು ಅವರಷ್ಟು ಒಳನೋಟಗಳೊಂದಿಗೆ ಕಟ್ಟಿಕೊಟ್ಟವರಲ್ಲಿ ಉಮರ್ ಖಯಾಮನ ನಂತರ ಬಚ್ಚನ್ ಬಿಟ್ಟರೆ ಮತ್ತೊಬ್ಬರಿಲ್ಲ. ಮದಿರೆಯ ಪ್ಯಾಲೆಯನ್ನು ಎತ್ತಿಕೊಂಡು ಅವರ ಪ್ರಪ್ರಥಮ ಕಾವ್ಯ ಸಂಕಲನ ‘ಮಧುಶಾಲಾ’ ನೀವು ಕೈಯಲ್ಲಿ ಹಿಡಿದರೆ ಸಾಕು, ಬೇರೆ ಜಗತ್ತಿನ, ಸಮಾಧನದ ಅವಶ್ಯಕತೆ ಇರುವುದಿಲ್ಲ. ಅವರು ಹೇಳುತ್ತಾರೆ, ನೀವು ಕೇಳುತ್ತೀರಿ, ಅವರು ಹಾಡುತ್ತಾರೆ, ನೀವು ನಾದಭೃಂಗವಾಗಿ ಓಲಾಡುತ್ತಿರುತ್ತೀರಿ, ತೇಲಾಡುತ್ತಿರುತ್ತೀರಿ. ‘ಮಧುಶಾಲಾ’ದ ಒಂದು ಪದ್ಯ –
ಶೆರೆಯಲ್ಲ ಗೆಳೆಯ
ಇವು ಮದಿರಾಲಯದ ಕಣ್ಣೀರ ಹನಿಗಳು
ಶೆರೆಯಲ್ಲ ಗೆಳೆಯ
ಇವು ಯಾವುದೋ ಕಾಲದ ಸುಖದ ಕೆಲ ಕ್ಷಣಗಳು
ಸಾಖಿಯಾಗಿ ಕುಣಿಯುವ ಇವಳು
ನನ್ನ ಎದೆಯಗಾನಕೆ ಹೆಜ್ಜೆ ಹಾಕಿದವಳಲ್ಲ
ನನ್ನ ವಿರಹಕೆ ಕೈ ಸೋಕಿದವಳು
          ಆಚ್ಚರಿಯ ಸಂಗತಿ ಎಂದರೆ, ಶೆರೆಯೇ ಎಲ್ಲವು ಎಂಬ ಭ್ರಮೆಯನ್ನು ಸೃಷ್ಟಿಸುವ ‘ಮಧುಶಾಲಾ’ ಪ್ರಕಟವಾಗುವವರೆಗೂ ಹರಿವಂಶರಾಯ್ ಶೆರೆಯ ಒಂದು ತೊಟ್ಟು ಅನುಭವವನ್ನು ಹೊಂದಿರಲಿಲ್ಲ. ಕೃತಿ ಪ್ರಕಟಗೊಂಡ ನಂತರ ಮಧುಶಾಲಾಗಳೊಂದಿಗೆ ಮದಿರೆಯನ್ನು ಒಪ್ಪಿಕೊಂಡ ಹರಿವಂಶರಾಯ್, ಹೆಚ್ಚು-ಕಡಿಮೆ ಬದುಕಿನ ಕೊನೆಯವರೆಗೂ ಅವರ ಮುದವನ್ನು ಧಿಕ್ಕರಿಸಲಿಲ್ಲ. 

     ಹಿಂದಿಯ 1930 ರ ಆಸುಪಾಸಿನ ಛಾಯಾವಾದ ಪಂಥದ ಕವಿಗಳಲ್ಲಿ ಅಗ್ರಗಣ್ಯ ಹರಿವಂಶರಾಯ್ ಬಚ್ಚನ್. ಖಾಯಿಸ್ಥಾ ಜನಾಂಗದ ಶ್ರೀವಾತ್ಸವ ಕುಟುಂಬದಲ್ಲಿ 27, ನವೆಂಬರ್ 1907 ರಲ್ಲಿ ಪ್ರಥಾಪ್‍ಘಡ್ ಜಿಲ್ಲೆಯ ಬಾಬುಪಟ್ಟಿ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ಹರಿವಂಶರಾಯ್, ವರ್ತಮಾನದ ಉತ್ತರ ಪ್ರದೇಶದವರಾಗುತ್ತಾರೆ. ಪ್ರತಾಪ್ ನಾರಾಯಣ್ ಶ್ರೀವಾತ್ಸವ ಮತ್ತು ಸರಸ್ವತಿದೇವಿಯವರ ಹಿರಿಯ ಮಗನಾದ ಇವರ ಪೂರ್ಣ ಹೆಸರು ಹರಿವಂಶರಾಯ್ ಬಚ್ಚನ್ ಶ್ರೀವಾತ್ಸವ. ಪ್ರಾಥಮಿಕ ಶಿಕ್ಷಣವನ್ನು ಸ್ಥಳೀಯ ಮುನಿಸಿಪಲ್ ಶಾಲೆಯಲ್ಲಿಯೇ ಮುಗಿಸಿ, ಲಾ ಓದುವದಕ್ಕಾಗಿ ಉರ್ದು ಭಾಷೆಯನ್ನು ಕಲಿತರು. ಅಲಹಾಬಾದ್ ಮತ್ತು ಬನಾರಸ ವಿಶ್ವವಿದ್ಯಾಲಯಗಳಲ್ಲಿ ಅಭ್ಯಸಿಸುವಾಗ ದೇಶ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿಕೊಂಡು, ಮಹಾತ್ಮ ಗಾಂಧಿಯ ಗಮನವನ್ನೂ ಸೆಳೆದರು. ಅವರಿಂದ ಅತ್ಯುತ್ತಮ ಹಳೆಯ ವಿದ್ಯಾರ್ಥಿ ಪ್ರಶಸ್ತಿಯಿಂದ ಪುರಸ್ಕøತರಾದರು.
      ಹರಿವಂಶರಾಯ್‍ರ ಬದುಕಿನ ಎರಡನೆಯ ಘಟ್ಟ ಪ್ರಾರಭವಾಗುವುದು 1941 ರಲ್ಲಿ. 1941 ರಿಂದ 1951ರ ವರೆಗೆ ಒಂದು ದಶಕದ ಕಾಲ ಅಲಹಬಾದ್ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಪ್ರೊಫೆಸರ್‍ರಾಗಿದ್ದ ಅವರು, ಎರಡು ವರ್ಷಗಳ ಕಾಲ ಕೆಂಬ್ರಿಜ್‍ನ ಸೇಂಟ್ ಕ್ಯಾಥರಿನ್ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ನಿಯುಕ್ತಗೊಂಡರು. ಇದೇ ವೇಳೆ, ಹರಿವಂಶರಾಯ್‍ರಷ್ಟೇ ಲೌಖಿಕ-ಅಲೌಖಿಕ ಮಹಾ ಮಿಶ್ರಣವಾಗಿದ್ದ ಡಬ್ಲ್ಯೂಬಿ ಏಟ್ಸ್‍ನನ್ನು ಕುರಿತು ಥಾಮಸ್ ರೈಸ್ ಹೆನ್‍ನ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡುವ ಅವಕಾಶ ಹರಿವಂಶರಿಗೆ ದಕ್ಕಿದ್ದು. ಅಂದಹಾಗೆ, ಈ ರೀತಿ ಇಂಗ್ಲೀಷ್‍ನಲ್ಲಿ ವಿದೇಶದಲ್ಲಿ ಸಂಶೋಧನೆ ಮಾಡಿದವರಲ್ಲಿ ಎರಡನೆಯವರಾಗಿದ್ದರು ಬಚ್ಚನ್. ಬಚ್ಚನ್ ಎಂದರೆ ಬಾಲಕ ಎಂದರ್ಥ. ಆದರೆ ಸಾಧನೆಯಲ್ಲಿ ಬಚ್ಚನ್ ಬಾಲಕರಾಗಿರಲಿಲ್ಲ, ಉತ್ತುಂಗದ ಸಂಪ್ರದಾಯಕ್ಕೆ ಮುನ್ನುಡಿ ಬರೆದ ನಾಯಕರಾಗಿದ್ದರು.
         ವಿಚಿತ್ರವೆಂದರೆ ಇದು. ಪಾಶ್ಚಾತ್ಯ ಬದುಕಿಗೆ ಆಲೋಚನೆಯಲ್ಲಿ ಅಷ್ಟೊಂದು ಹತ್ತಿರವಾಗಿದ್ದ ಬಚ್ಚನ್‍ರ ಮೊದಲ ಮದುವೆ ಜರುಗಿದ್ದು ಅವರ ಬದುಕಿನ 19 ನೇ ವಯಸ್ಸಿನಲ್ಲಿ. ಹೆಂಡತಿ ಶ್ಯಾಮಾ ಆಗ ಕೇವಲ 14 ವರ್ಷದವಳು. 10 ವರ್ಷ ಬಾಳಿದ ಅವಳು, ಕ್ಷಯರೋಗದಿಂದ ನಿಧನಹೊಂದಿದಳು. ವ್ಯಕ್ತಿಯ ಸಾವಿನಷ್ಟು ಸರಳವಲ್ಲ ನೆನಪುಗಳ ಅವಸಾನ. ಶ್ಯಾಮಾ ಆಗಲೇ ಬಚ್ಚನ್‍ರಲ್ಲಿ ಮಧುಶಾಲಾ ಆಗಿ ಮರುಹುಟ್ಟು ಪಡೆಯುತ್ತಿದ್ದಳು. ಮದಿರೆಯಾಗಿ ಮನಸ್ಸಿಗಿಳಿದು, ಕವಿತೆಯಾಗಿ ಅರಳುತ್ತಿದ್ದಳು.
ನನ್ನ ಶೆರೆಯಲ್ಲಿ ಒಂದೊಂದು
ಹನಿ ಒಬ್ಬೊಬ್ಬರಿಗೂ
ನನ್ನ ಪ್ಯಾಲೆಯೊಳಗೆ
ಒಂದೊಂದು ಗುಟುಕು ಎಲ್ಲರಿಗೂ
ನನ್ನ ಸಾಕಿಯೊಳಗೇ
ಅವರವರ ಸಾಕಿಯರ ಸುಖ ಎಲ್ಲರಿಗೂ
ಹೀಗೆ ಯಾರಿಗೆ ಯಾವ ಹಂಬಲವೊ
ಹಾಗೇ ಕಂಡಳು ನನ್ನ ಮಧುಶಾಲಾ
                  

          ಕೆಂಬ್ರಿಜ್‍ನ ಹಳೆಯ ಮಹಲುಗಳು, ಸೇತುವೆಗಳು, ನೀಳ ವಿಶಾಲ ರಸ್ತೆಗಳು ಅಲ್ಲಿಯೇ ಸುಳಿದು ಹೋದ ನ್ಯೂಟನ್, ಬೆಕನ್, ಡಾರ್ವಿನ್, ಸ್ಪೆನ್ಸರ್, ಕ್ರಾಮ್‍ವೆಲ್ ಹಾಗೂ ಮಿಲ್ಟನ್‍ರ ಆತ್ಮಗಳು, ಇದೇ ಕೆಂಬ್ರಿಜ್‍ನ ಮಾರ್ಲೊ, ಗ್ರೇ, ಥ್ಯಾಕರೆ, ವಡ್ರ್ಸವರ್ತ, ಬೈರನ್ ಮತ್ತು ಟೆನ್ನಿಸ್‍ನರ ಕವಿತೆಯ ಸಾಲುಗಳು, ಸುಳಿಸುಳಿಯಾಗಿ ಬರುತ್ತಿದ್ದ ಇಕ್‍ಬಾಲ್ ಹಾಗೂ ಅರವಿಂದರ ಕಾವ್ಯದ ಗಾನಗಂಧ ಈ ಕೆಂಬ್ರಿಜ್‍ನ್ನು ಹುಚ್ಚನಂತೆ ಮೋಹಿಸುವಂತೆ ಮಾಡಿತು. ಅಂದಹಾಗೆ, ಇಲ್ಲಿಗೆ ಬರುವುದರೊಳಗಾಗಿ ಎರಡನೆಯ ಮದುವೆಯನ್ನು ತೇಜಾರೊಂದಿಗೆ ಮಾಡಿಕೊಂಡಿದ್ದ ಹರಿವಂಶರಾಯ್, ಎರಡು ಮಕ್ಕಳ ತಂದೆಯೂ ಆಗಿದ್ದರು. ಮಕ್ಕಳಾದ ಅಮಿತಾಬ್ ಮತ್ತು ಅಜತಾಬ್‍ರನ್ನು ಬಿಟ್ಟು, ಪ್ರೀತಿಯ ಹೆಂಡತಿಯನ್ನು ಬಿಟ್ಟು, ಅವರಿಲ್ಲದ ವೇಳೆಯಲ್ಲಿ ಅಲ್ಲಿ ಭಾರತದಲ್ಲಿ ಅವರ ಕುಟುಂಬದ ಸುತ್ತಲೂ ನಡೆಯುತ್ತಿದ್ದ ಕೆಟ್ಟ ಉಹಾ-ಪೂಹಗಳನ್ನು ಬದಿಗೆ ಸರಿಸಿ, ಅಧ್ಯಯನವನ್ನು ಮಾಡುವುದು ಸಾವಿನಷ್ಟೇ ಸಂಕಟದ ಸಂಗತಿಯಾಗಿತ್ತು ಹರಿವಂಶರಾಯ್‍ರಿಗೆ. ಕುಟುಂಬ ನೆಹರು ಕುಟುಂಬದೊಂದಿಗೆ ಸಮೀಪವೇನೊ ಆಗಿತ್ತು, ಆದರೆ ಆ ಕಾರಣಕ್ಕಾಗಿಯೇ ಬರುತ್ತಿದ್ದ ಅಪಮಾನದ ಮೊತ್ತವೂ ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗಿತ್ತು.
          ಭಾರತಕ್ಕೆ ಮರಳಿದ ಹರಿವಂಶರಾಯ್ ಅದೇ ಉಪನ್ಯಾಸಕ ವೃತ್ತಿಯಲ್ಲಿದ್ದರು. ಜೊತೆಗೆ ಅಲಹಾಬಾದಿನ ಆಕಾಶವಾಣಿ ಕೇಂದ್ರ ನಿರ್ದೇಶಕರೂ ಆದರು. 1966 ರಲ್ಲಿ ರಾಜ್ಯ ಸಭಾ ಸದಸ್ಯರಾಗಿ ಆನಂತರ ಸಾಹಿತ್ಯ ಅಕಾಡೆಮಿ, ಪದ್ಮಭೂಷಣ, ಸರಸ್ವತಿ ಸಮ್ಮಾನ್ ಹಾಗೂ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿಯಿಂದ ಪುರಸ್ಕøತರಾದ ಹರಿವಂಶರಾಯ್, ಒಬ್ಬ ವಿಚಿತ್ರ ದರ್ಶನ ಸಾಹಿತಿಯಾಗಿಯೂ ರೂಪಗೊಳ್ಳುತ್ತಿದ್ದರು. ಇಂದಿಗೂ ಭಗ್ವತ್‍ಗೀತೆ ಕುರಿತಾದ ಅವರ ಬರಹ ಒಂದು ಅನನ್ಯ ಅನ್ವೇಷಣೆ. 96 ವರ್ಷ ದೀರ್ಘಕಾಲ ಬಾಳಿ ಭಾರತವಷ್ಟೇ ಅಲ್ಲ, ಇಡೀ ಪ್ರಪಂಚವೇ ನಿಬ್ಬೆರಗಾಗುವ ಕಲಾವಿದ ಮಗನನ್ನು ನೀಡಿ ಮರೆಯಾದ ಹರಿವಂಶರಾಯ್, ತಮ್ಮ ಪರಿಚಯವನ್ನು ಮಾಡಿಕೊಳ್ಳುವುದು ಮೂರೇ ವಾಕ್ಯಗಳಲ್ಲಿ –
ಮಣ್ಣಿನ ದೇಹ, ಮಿತಿಯರಿಯದ ಮನಸ್ಸು, ಕ್ಷಣಭಂಗುರ ಬದುಕು – ಇಷ್ಟೇ ನನ್ನ ಪರಿಚಯ
          ಮಣ್ಣು, ಹೆಣ್ಣು, ಹೆಂಡಗಳಲ್ಲಿ ಮಿಂದೇಳುವವ ಹೇಳುವ ಬದುಕಿನ ಸತ್ಯಗಳಿಗಿರುವ ಹೊಳಪು, ಹೊತ್ತಿಗೆಗಳನ್ನು ಮುಂದಿಟ್ಟುಕೊಂಡು ಜೀವನವೆಂದರೆ ಹೀಗೆ ಎಂದು ಖಂಡಿಸುವ ಪಂಡಿತನ ಮಾತುಗಳಿಗಿರುವುದಿಲ್ಲ. ಯಾಕೆಂದರೆ, ನಮ್ಮ ಬದುಕುಗಳು ಪ್ರಪಂಚದ ಯಾವ ಪುಸ್ತಕಗಳಲ್ಲೂ ವ್ಯಾಖ್ಯಾನಿಸಲ್ಪಟ್ಟಿಲ್ಲ. ಏನೆಲ್ಲ ಸಿಗುವ ಈ ಪ್ರಪಂಚದಲ್ಲಿ ನಮ್ಮ ಬದುಕನ್ನು ಅಂತ್ಯಕ್ಕೂ ಮುಂಚೆ ಹೇಳಿಬಿಡುವ ಒಂದು ಕೃತಿಯೂ ಸಿಕ್ಕಿಲ್ಲ, ಸಿಗುವುದೂ ಇಲ್ಲ. ಅಂತೆಯೇ ಬರೆಯುತ್ತಾರೆ ಬಚ್ಚನ್ -
ಮನದ ಮಹಲುಗಳು ಕುಸಿದಷ್ಟೂ
ಖುಷಿಯಾಗುತ್ತಾಳೆ ಮಧುಶಾಲಾ
ಬೇಗ ಕುಡಿ ಗೆಳೆಯನೆ, ಹೊರಟುಬಿಡುತ್ತಾರೆ ಕುಡುಕರು
ಎಷ್ಟು ನನ್ನವೊ, ಅದೆಷ್ಟು ನಿಮ್ಮವೊ
ಹೊತ್ತಿ ಉರಿದಷ್ಟು ಶಾಂತವಾಗಿ ಖಾಲಿಯಾಗುತ್ತವೆ
ಶೆರೆಯ ಗ್ಲಾಸುಗಳು
          ಒಂದು ಸತ್ಯ. ಕಾವ್ಯವಿರುವವರೆಗೂ ಬಚ್ಚನ್ ಇರುತ್ತಾರೆ ಎನ್ನುವುದು ಅರ್ಧ ಸತ್ಯ. ಮದಿರೆ ಇರುವವರೆಗೂ ಮಾತಾಡುತ್ತಾಳೆ ಮಧುಶಾಲಾ ಎನ್ನುವುದು ಪೂರ್ಣ ಸತ್ಯ.