Sunday 15 December 2013

ಮಾತಿಗೆ ಸೊತವಳು-ಭಾಗ ೨

ಏನೋ ಹೇಳಲು ಹೋಗಿ ನಾನು ನಿಮ್ಮನ್ನು ಎಲ್ಲೋ ತೆಗೆದುಕೊಂಡು ಹೋದೆ. ನನ್ನಜ್ಜಿಯ ಭೂತಕಾಲಕ್ಕೂ, ಈಗ ಸೋತು ಬಸವಳಿದಿರುವ ಬಾವಿಗೂ, ಒಂದು ಮರೆಯದ, ಮುಗಿಯದ ಸಂಬಂಧ. ಅಂದಹಾಗೆ ಈ ಬಾವಿಗೆ ಒಂದು ಹೆಸರೂ ಇದೆ- 'ಪಿಂಜಾರ ಬಾವಿ'. ಈ ದೇಶದ ವ್ಯವಸ್ಥೆಯಲ್ಲಿ ಈ ಪಿಂಜಾರರದು ಒಂದು ತ್ರಿಶಂಕು ಸ್ಥಿತಿ. ಅವರು ಜಾತಿಗಳ ಪಟ್ಟಿಯಲ್ಲಿ ಮುಸ್ಲಿಂರು ಆದರೆ ಹಿಂದೂ ದೇವರುಗಳನ್ನೂ ಆರಾಧಿಸುತ್ತಾರೆ. ಹೀಗಾಗಿ ಪಿಂಜಾರರು ಮುಸ್ಲಿಂರಿಗೆ ಒಪ್ಪಿತವಲ್ಲ. ಆದರೆ ಗಣನೆಯಲ್ಲಿ ಮುಸ್ಲಿಂರಾಗಿರುವುದರಿಂದ ಇವರು ಹಿಂದೂ ದೇವರುಗಳನ್ನು ಪೂಜಿಸಿಯೂ ಇವರು ಹಿಂದೂಗಳ ಬಂಧುಗಳಲ್ಲ. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಪ್ರಚಲಿತವಿರುವಂತೆ ಹಿಂದೂ ದಲಿತ ಸ್ಥರದ ಜನಗಳು ಒಂದು ಕಾಲಕ್ಕೆ ಮುಸ್ಲಿಂ ಆಳ್ವಿಕೆಯ ಅವಧಿಯಲ್ಲಿ ಪಿಂಜಾರರಾದರಂತೆ. ಇನ್ನು ಕುತೂಹಲದ ಸಂಗತಿ ಎಂದರೆ ಈ ಜನಾಂಗದ ಬಹುಪಾಲು ಸ್ತ್ರೀಯರು ವೇಶ್ಯಾ ಚಟುವಟಿಕೆಗೆ ತೊಡಗಿಕೊಂಡಿದ್ದು. ಇದಿರಲಿ, ಅಜ್ಜಿಯ ಊರಿನ ಈ ಬಾವಿ ಏಕೆ ಪಿಂಜಾರ ಬಾವಿಯಾಯಿತು? ಗೊತ್ತಿಲ್ಲ. ಅದರ ಕೆಳಪುರಾಣ, ಸ್ಥಳಪುರಾಣಗಳನ್ನು ಹೇಳುವವರೂ ಈಗ ಬದುಕಿಲ್ಲ. ಒಟ್ಟಾರೆ ಇತ್ತ ಮುಸ್ಲಿಂರೂ ಅಲ್ಲದ, ಅತ್ತ ಹಿಂದೂಗಳೂ ಅಲ್ಲದ ಈ ಪಿಂಜಾರರು ಉಪೇಕ್ಷಿತರು. ಅದ್ಯಾಕೆ ಈ ಬಾವಿಗೆ ಪಿಂಜಾರ ಬಾವಿ ಅಂತ ಹೆಸರು ಬಂತೋ ಅದೊಂದು ವಿವರಗಳಿಲ್ಲದ ವಾಸ್ತವ. ಆದರೆ ಆದರೆ ಒಂದಂತೂ ಸತ್ಯ ಈ ಪಿಂಜಾರ ಬಾವಿಯಿಂದಲೇ ಊರ ಮಲ್ಲಬಸವಣ್ಣನ ಗುಡಿಗೂ, ಮುಲ್ಲಾನ ಮನೆಗೂ ನೀರು ಹೋಗಿದ್ದನ್ನು ನಾನು ನೋಡಿದ್ದೇನೆ. ಗೊತ್ತಿರಲಿ, ಈ ಊರ ಹಾಜೇಸಾಬನ ದರ್ಗಾ ಕೂಡ ಈ ನೀರ ರುಚಿ ಕಂಡಿದೆ.

         
ಇದೆಲ್ಲ ಬಿಡಿ, ನಾನು ಹೇಳಬೇಕಾದುದು ನಮ್ಮಜ್ಜಿಯ ಅವ್ವನ ಕತೆ. ಈ ಕತೆ ಹೇಳಿದ ಮೇಲೆ ನಿಮಗನ್ನಿಸಬಹುದು, ನಾನು ಇದುವರೆಗೂ ಚರ್ಚಿಸಿದ ಈ ಬಾವಿ ನಮ್ಮಜ್ಜಿಯ ಪಾಲಿಗೆ ಎಂಥ ಭಯಾನಕ ಸ್ಥಳವಾಗಿರಬಹುದು ಎಂದು. ಅದಕ್ಕೇ ಇರಬಹುದೆನೊ ಒಂದು ತಂಬಿಗೆ ನೀರಿಗೂ ನನ್ನಜ್ಜಿ ತನ್ನ ಎಪ್ಪತ್ತು ವರ್ಷದ ಬದುಕಿನಲ್ಲಿ ಇತ್ತ ಎಂದೂ ಬಂದ ಸಾಕ್ಷಿಗಳು ಇಲ್ಲ. ಆನಂತರ ನೀರು ತರುವುದು ಅದೇನಿದ್ದರೂ ನಮ್ಮಜ್ಜನದೇ ಕೆಲಸ, ಇಲ್ಲ ಮನೆಯಾಳುಗಳದ್ದು. ತಮ್ಮವ್ವನ ಬಗ್ಗೆ ಹೇಳುವಾಗ ನಮ್ಮಜ್ಜಿ ಎಂದೂ ಅತ್ಯಂತ ಭಾವುಕಳಾಗಿರುವುದನ್ನ ನಾನು ನೋಡಲಿಲ್ಲ. ಎಲ್ಲ  ಕತೆಗಳಂತೆ ಇದು ಒಂದು ಕತೆ ಎಂದು ಹೇಳಿಬಿಡುತ್ತಿದ್ದಳಷ್ಟೆ. ನಾನಾಗಲೇ ಹೇಳಿದೆನಲ್ಲ ಅವಳಿದ್ದದ್ದೇ ಹಾಗೆ. ಇದೇ ಪಿಂಜಾರ ಬಾವಿಗೆ ಬಿದ್ದು ನನ್ನಜ್ಜಿಯ ಅವ್ವ ಪ್ರಾಣ ನೀಗಿದ್ದರೂ ಕೂಡ ಅವಳೆಂದೂ ಆ ಕುರಿತು ನಮಗೆ ಭಯಾನಕವಾಗಿ ವಿವರಿಸಲಿಲ್ಲ. ಅಗೌರವದ ಮಾತುಗಳನ್ನಾಡಲಿಲ್ಲ, ಕಾರಣ ಬಹುತೇಕ ತನ್ನ ತಾಯಿಯ ಆ ಕಠಿಣ ನಿರ್ಧಾರದ ಹಿಂದಿದ್ದ ಭಾವಶುದ್ಧಿ ಮತ್ತು ನಂಬಿಕೆ, ಮುಗ್ಧ ನಂಬಿಕೆ.

           ನಮ್ಮಜ್ಜಿಯ ಅವ್ವನಿಗೆ ಮಾತುಗಳೆಂದರೆ ಬಾಯಿ ಚಟ ತೀರಿಸಿಕೊಳ್ಳಲು ಬರೀ ಶಬ್ದಗಳ ಹಂದರವಾಗಿರಲಿಲ್ಲವಂತೆ. ಎಷ್ಟು ವಿಚಿತ್ರ ನೋಡಿ. ಈ ಇವಳಿಗೆ ಬದುಕೆಂದರೆ ಬರೀ ಮಾತುಗಳ ಜಾತ್ರೆ, ಆದರೆ ಅವಳಿಗೆ ಬದುಕೆಂದರೆ ಮೌನದ ಮಹಾ ಯಾತ್ರೆ. ಆಕೆ ಒಮ್ಮೆ ಮಾತನಾಡಿದರೆ ಮುಗಿಯಿತು ಅದು ಅನುಶಾಸನದ ಮಾರ್ಗವಾಗಬೇಕು ಅಥವಾ ಆ ಮಾತಿಗಾಗಿ ಅವಳ ಪ್ರಾಣವೇ ಹೋಗಬೇಕು. ಅವಳು ಕನಸಿನಲ್ಲಿಯೂ ಆಡಿದ ಮಾತಿಗೆ ಮೌಲ್ಯಕಟ್ಟುವವಳು, ಕಟ್ಟಿದವಳು. ಪ್ರಾಣಕ್ಕಿಂತಲೂ ಪರಮವಾಗಿತ್ತು ಆಕೆಗೆ ಮಾತು. ಮದುವೆಯಾದ ಮೇಲೆ ಆಕೆಗೆ ಎರಡು ಮಕ್ಕಳಾದವು. ಒಂದು ಹೆಣ್ಣು, ಅವಳೇ ನನ್ನಜ್ಜಿ. ಇನ್ನೊಂದು ಗಂಡು. ಈ ಗಂಡು ಮಗ ಬೆಳೆದು ಪ್ರಾಯಕ್ಕೆ ಬಂದಾಗ ಒಟ್ಟಾರೆ ಸಂಸಾರ ಅದರ ಸುತ್ತಲಿನ ಕ್ರಿಯೆಗಳಲ್ಲಿ  ಅನಾಸಕ್ತನಾಗಿದ್ದ ಆತನ ಮದುವೆ ಮಾಡಿದಳು. ಆದರೆ ಈ ಮಗ ಮಾತ್ರ ಮೈಯೆಲ್ಲ ಬೂದಿ ಬಳಿದುಕೊಂಡು ಮದುವೆ ನಂತರವೂ ಸನ್ಯಾಸಿಯಂತೆ ಅಲೆಯಲಾರಂಭಿಸಿದ. ಆತ ಮಹಾ ಮೌನಿಯಾದ. ಹೇಳದೆ, ಕೇಳದೆ ಊರ ಹೊರಗಿನ ಹಾಳು ದೇವಾಲಯಗಳಲ್ಲಿ, ಪಾಳು ಬಾವಿಗಳ ಗೂಡಿನಂಥ ಮಾಡುಗಳಲ್ಲಿ, ಉರಿ ಬಿಸಿಲಿನ ಬೇಸಿಗೆಯ ದಿನಗಳಲ್ಲಿ ಧೋ ಎಂದು ಮಳೆ ಸುರಿಯುವ ಮಳೆಗಾಲದ ರಾತ್ರಿಗಳಲ್ಲಿ ನಿರಂತರ ಧ್ಯಾನ, ಮೌನ, ತಪಸ್ಸು ಎಂದು ಅರೆ ಹುಚ್ಚನಂತೆ ಹಗಲು ರಾತ್ರಿ ಎನ್ನದೆ ಅಲೆದಾಡಲು ಪ್ರಾರಂಭಿಸಿದ.

            ನನ್ನಜ್ಜಿಯ ಅವ್ವ ಭಯಂಕರ ಚಿಂತೆಗೊಳಗಾದಳು, ಹರಕೆ ಹೊತ್ತಳು, ಹಲವು ದೇವರ ಮುಂದೆ ಹೋಗಿ ಮೊರೆ ಹೊಕ್ಕಳು. ಆಕೆಗೆ ಎಷ್ಟೊಂದು ಚಿಂತೆಯಾಗಿತ್ತು ಅಂದರೆ ಹಗಲು- ರಾತ್ರಿ ತನ್ನ ಆರಾಧ್ಯ ದೈವ ಶ್ರೀಶೈಲ ಮಲ್ಲಿಕಾರ್ಜುನನಿಗೆ ಮಗನ ಸಂಸಾರ ಸರಿಯಾಗಲಿ ಎಂದು ಬೇಡಿಕೊಂಡಳು. ಇರುವ ಒಬ್ಬ ಮಗ ಸಂಸಾರ ಮಾಡದೆ, ದೊಡ್ಮನೆಗೆ ದೀಪ ಹಚ್ಚುವ ಮೊಮ್ಮಗನನ್ನು ಕೊಡದೆ ಹೋದರೆ? ಈ ಚಿಂತೆ ಚಿತೆಯಾಯಿತು. ಕೊನೆಗೊಂದು ರಾತ್ರಿ ತನ್ನ ಈ ಭಯಾನಕ ಮಾನಸಿಕ ಸ್ಥಿತಿಯಲ್ಲಿ ದೇವರಿಗೆ ವಚನಕೊಟ್ಟಳು, ಅಲ್ಲ ಮಾತುಕೊಟ್ಟಳು-“"ದೇವರೇ, ನನ್ನ ಮಲ್ಲಿಕಾರ್ಜುನ, ಶ್ರೀಶೈಲ ಗಿರಿವಾಸ, ನನ್ನ ಮಗ ಸಂಸಾರದ ದಡ ಹಿಡಿಯಲಿ. ಮನೆಗೆ ಬಂದ ಸೊಸೆ ಬರಡಾಗದೆ, ಮಕ್ಕಳು, ಮೊಮ್ಮಕ್ಕಳು ಹುಟ್ಟಿ ನನ್ನ ಮನೆಯೆಂಬುದು ಗೀಜಗನ ಗೂಡಾಗಲಿ." ವಿಚಿತ್ರವೆಂದರೆ 'ದೊಡ್ಮನೆ'ಯಲ್ಲಿ ಈಕೆಯ ಆಶಯಕ್ಕೆ ವ್ಯತಿರಿಕ್ತವಾಗಿ ಎನ್ನುವಂತೆ, ತನ್ನ ಸ್ವಯಂ ಸಂಸಾರದ ಗೂಡು ಕಟ್ಟಿಕೊಳ್ಳದೇ ಹೋದರೂ 'ದೊಡ್ಮನೆ'ಯನ್ನು ಒಂದು ಪ್ರಾಣಿ ಸಂಗ್ರಹಾಲಯ ಮಾಡಿದ್ದ ಈ ಮಗ. ಎಂಟು ಎತ್ತುಗಳ ಒಕ್ಕಲುತನವಿದ್ದ ದೊಡ್ಮನೆಯಲ್ಲಿ ಮಗರಾಯ ಬೈರಾಗಿಯಾಗಿ ಸುಂದರ ಹೆಂಡತಿಯನ್ನು ಒಳಗಿಟ್ಟು ಹೊರಗೆ ಅಂಗಳದಲ್ಲಿ ತಾನ್ ಸಾಕಿದ ಗಿಳಿ, ಪಾರಿವಾಳ, ಹಾವು, ಮೊಲ, ಬಿಳಿ ಇಲಿಗಳನ್ನು ಮನೆ ಮುಂದೆ ಹೋಗುವವರಿಗೆಲ್ಲ ತೋರಿಸುತ್ತ ಡೊಂಬರವನಾಗಿದ್ದ. ದೊಡ್ಮನೆಯಲ್ಲಿ ಕಾಲಿಡುವುದೇ ಒಂದು ಮರ್ಯಾದೆ ಎಂದುಕೊಳ್ಳುತ್ತಿದ್ದವರಿಗೆ ಈಗ ಅದೊಂದು ಮನರಂಜನೆ ಮತ್ತು ಮೋಜಿನ ಸ್ಥಳ. ಹೀಗಾಗಿ ಚಿಂತೆಗೊಳಗಾದ ತಾಯಿ ದೇವರಿಗೆ ಹೇಳಿದಳು - "ಒಂದು ವೇಳೆ ಈ ನನ್ನ ಪ್ರಾರ್ಥನೆ ಈಡೇರಿದರೆ ನಾನು ನನ್ನ ಪ್ರಾಣವನ್ನೇ ನಿನಗೆ ಕೊಟ್ಟುಬಿಡುತ್ತೇನೆ"”ಹೀಗೆ ರಾತ್ರಿಯ ನಿದ್ದೆಯ ಅರೆಪ್ರಜ್ಞಾವಸ್ಥೆಯಲ್ಲಿ ನನ್ನಜ್ಜಿಯ ತಾಯಿಯ ಮಾತು ಹೋಯಿತು. ಬೆಳಗಾದಾಗ ಯಾರೋ ಆಕೆಗೆ ಹೇಳಿದರು ಹಾಗಂತ ಅವಳು ಆ ರಾತ್ರಿ ಬಡಬಡಿಸಿದ್ದನ್ನು.

         ಎಷ್ಟು ವಿಚಿತ್ರ ನೋಡಿ, ಕ್ರಮೇಣ ಕಾಲ ಉರುಳಿತು. ನನ್ನಜ್ಜಿಯ ಅಣ್ಣ ಮೆಲ್ಲಗೆ ಸಂಸಾರದತ್ತ ಒಲವು ತೋರಿಸಿದ. ಹಾಳು ಬಿಟ್ಟಿದ್ದ ಹೆಂಡತಿಯ ಎದೆಹೊಕ್ಕು ಮಕ್ಕಳಿಗೆ ಜನ್ಮ ನೀಡಿದ. ಶುದ್ಧ ಸಂಸಾರಿಯಾದ. ಮನೆ ತುಂಬ ಈಗ ಮೊಮ್ಮಕ್ಕಳು. ಆಕೆಗೆ ಈಗ ಒಂದೆಡೆ ಹರ್ಷ, ಇನ್ನೊಂದೆಡೆ ತಾನು ದೇವರಿಗೆ ನೀಡಿದ ಆ ವಚನ. ಇದಕ್ಕೆಂದೇ ಈಗ ಮನೆಯಲ್ಲಿ ಅವಳಿಗೆ ಸರ್ಪಗಾವಲು ಪ್ರಾರಂಭವಾಯಿತು. ಯಾಕೆಂದರೆ ರಾತ್ರಿ ಎಲ್ಲಿಯಾದರೂ ಎದ್ದು ಹೋಗಿ ಬಾವಿಗೆ ಬಿದ್ದು ಈಕೆ ಪ್ರಾಣ ಬಿಟ್ಟಾಳು ಎಂದು ಎಲ್ಲರಿಗೂ ಚಿಂತೆ. ಹೀಗಾಗಿ ಅಜ್ಜ ಮಲಗುವಾಗ ಆಕೆಯ ಸೀರೆಯ ಒಂದು ಅಂಚನ್ನು ತನ್ನ ಧೋತರದ ತುದಿಗೇ ಕಟ್ಟಿಕೊಂಡು ಮಲಗುತ್ತಿದ್ದ. ಆದರೂ ಅವಳದು ವಚನ ಬದ್ಧ ದಾರಿ. ದೃಢ ನಿರ್ಧಾರ. ಮಾತೆಂಬುದು ಆಕೆಗೆ ಬಿಟ್ಟ ಬಾಣ. ತೊಟ್ಟು ಬಿಟ್ಟ ಸೀರೆ. ಅಜ್ಜಿ ದೇವರಿಗೆ ಮಾತುಕೊಟ್ಟಂತೆ ಸಾಯಲೇಬೇಕೆಂದು ನಿರ್ಧರಿಸಿದಳು. ನಿರ್ಧಾರವನ್ನೇ ಬದುಕಿದಳು.

       ಮಳೆಗಾಲದ ದಿನಗಳು, ಇದ್ದಕ್ಕಿದ್ದಂತೆ ಒಂದು ರಾತ್ರಿ ಮನೆಯವರೆಲ್ಲ ಎದ್ದು ನೋಡಿದಾಗ ಅಜ್ಜಿಯ ಅವ್ವ ಹಾಸಿಗೆಯೊಳಗೆ ಇರಲಿಲ್ಲ. ಎಲ್ಲರೂ ಹೊರ ಬಂದು ನೋಡಿದಾಗ ಆಕೆಯ ಹೆಣ ಮನೆಯ ಪಕ್ಕದ ಬಾವಿಯಲ್ಲಿ ಬೋರಲಾಗಿ ಬಿದ್ದು ತೇಲಾಡುತ್ತಿತ್ತು. ಆದರೆ ಅವಳು ನಂಬಿಕೊಂಡಿದ್ದ ಮೌಲ್ಯ ಚಿರಾಯುವಾಯಿತು, ಅಮರವಾಯಿತು.
ಈಗ ಹೇಳಿ ಅವಳಿಗೆ ಮಾತೆಂದರೇನು? ವಚನ, ಭಾಷೆ, ಶಬ್ದಗಳೆಂದರೇನು? ನುಡಿಯೆಂದರೇನು? ನನ್ನ ಅಜ್ಜಿಯ ತಾಯಿ ನೆನಪಾದಾಗಲೆಲ್ಲ ನನ್ನೊಳಗೆ, ನನ್ನ ರಕ್ತದೊಳಗೆ ಆಕೆಯ ಮೌಲ್ಯ ಮತ್ತೆ ಮರುಹುಟ್ಟು ಪಡೆಯುತ್ತದೆ. ಮಾತು ಭಯ ಹುಟ್ಟಿಸುತ್ತದೆ. ಮೌನ ಲೇಸೆನ್ನಿಸುತ್ತದೆ. ಆಡಿ ಬಿಡಬಹುದಾದಂಥ ಮಾತಿಗೆ ಯಾವ ಬೆಲೆ ನೀಡಿದರೂ ಕಡಿಮೆ ಎನ್ನಿಸುತ್ತದೆ. ಪ್ರಾಣವೂ ಒಂದು ಭಾಷೆ ಎನ್ನುವುದಾದರೆ ಪ್ರಾಣವೇ ಹೋಗಲಿ ಭಾಷೆ ಮಾತ್ರ ಉಳಿಯಲಿ.

Tuesday 3 December 2013

ಮಾತಿಗೆ ಸೋತವಳು-ಭಾಗ-೧



ಒಂದು ಕ್ಷಣ, ನೀನು ಬೆಂಕಿ
ಮತ್ತೊಂದು ಕ್ಷಣ ಮೃದು ಇಬ್ಬನಿ
ನೀನು ವಜ್ರ,
ಒಮ್ಮೆ ನೀನು ದೇವದೂತ,
ಮತ್ತೆ ಪುನಃ ಶಿಲಾಮೂರ್ತಿ
                                                                       -ಅಲಿ ಸರ್ದಾರ್ ಜಾಫ್ರಿ
------------------------------------------------------------------------------------------------------------

ತಾಯಿ-ನಾಯಿ
            ನಮ್ಮ ತೋಟದ ಮನೆಯಲ್ಲೊಂದು ನಾಯಿ ಇತ್ತು. ಬೇಸಿಗೆ ರಜೆಗೆ ನಾವೆಲ್ಲ ತೋಟಕ್ಕೆ ಹೋದಾಗ ನಮ್ಮನ್ನು ಸ್ವಾಗತಿಸುತ್ತಿದ್ದ ಅದರ ಸಂಭ್ರಮ ಹೇಳಲು ಇಂದು ಭಾಷೆ ಸೋಲುತ್ತದೆ. ಅದರ ಹೆಸರು ಕಾಶಿ. ತೆಳ್ಳಗೆ-ಬೆಳ್ಳಗೆ, ಕಣ್ತುಂಬ ಕರುಣೆ, ಪ್ರಿತಿ ತುಂಬಿಕೊಂದು ಮುದ್ದಿಸಲು ಮೈಮೇಲೆ ಬರುತ್ತಿದ್ದ ಅದರ ಪ್ರೀತಿ ಈಗಲೂ ಸ್ಮರಣಿಯ.

           ಪ್ರೀತಿಗೆ ನಾಯಿ ಹಾಗೂ ತಾಯಿ ಎರಡೂ ಶ್ರೇಷ್ಠ ಉದಾಹರಣೆಗಳೇ. ತಾಯಿಗೆ ಹೇಸಿಗೆ ಇಲ್ಲ, ನಾಯಿಗೆ ನಾಚಿಕೆ ಇಲ್ಲ. ಎದೆ ತುಂಬಿ ಬಂದರೆ ಸಾಕು ಇವರ ಪ್ರೀತಿಯ ಅಭಿವ್ಯಕ್ತಿಗೆ ನಿಶ್ಚಿತ ಸ್ಥಳವೆಂಬುದಿಲ್ಲ ಔಪಚಾರಿಕತೆಯ ನಾಟಕೀಯ ಲೆಪನವಿಲ್ಲ.ತೋಟದ ಮನೆಯ ಮುಂದೆ, ಕಣಜದಲ್ಲಿ ರಾಶಿ ಇಟ್ಟುಕೊಂಡು, ಮಕ್ಕಳು ಆಳು, ದನಗಳು ಮಲಗಿಕೊಂಡಾಗ, ಕಾಶಿ ಎಚ್ಚರವಾಗಿದ್ದು ಕಾಯುತ್ತಿರುತ್ತಿತ್ತು. ಮನೆಯವರ್ಯಾರಾದರೂ ಊರಿಗೆ ಹೊರಟರೆ ತೋಟದ ಮನೆಯಿಂದ ಬಸ್ಟ್ಯಾಂಡಿನವರೆಗೂ ಚಕ್ಕಡಿಯ ಕೆಳಗೆ ಊರ ನಾಯಿಗಳಿಂದ ತನ್ನನ್ನು ರಕ್ಷಿಸಿಕೊಳ್ಳುತ್ತ ಹೋಗಿ ಕಳುಹಿಸಿ ಬರುತ್ತಿತ್ತು. ರಾತ್ರಿ ದಿಂಬು ಮರೆತು ಮಲಗಿದ್ದರೆ ಅದರ ಬೆನ್ನನ್ನೇ ದಿಂಬಿನಂತೆ ಬಳಸಿಕೊಂಡು ನಮ್ಮ ತಲೆ ಇಡಬಹುದಾಗಿತ್ತು. ನಾವು ಕಾಶಿಗೆ ಕೈ ಹಚ್ಚುವಂತಿರಲಿಲ್ಲ. ಅದು ಕಲ್ಲೋ, ಮುಳ್ಳೋ ತುಳಿದುಕೊಂಡು ಕಾಲಿಗೆ ಏನಾದರೂ ಗಾಯ ಮಾಡಿಕೊಂಡು ಬಂದರೆ ಆಗ ಮಾತ್ರ ಕಾಶಿ ತನ್ನ ಉಪಚಾರಕ್ಕೆ ಅವಕಾಶ ಮಾಡಿಕೊಡುತ್ತಿತ್ತು. ಮೂರು ತಿಂಗಳು ಬೇಸಿಗೆ ರಜೆ ಮುಗಿಸಿಕೊಂಡು ನಾವು ಚಕ್ಕಡಿಯಲ್ಲಿ ಊರಿಗೆ ಹೊರಟಾಗ ನೂರಾರು ಗಾವುದ ನಡೆದುಕೊಂಡು ಕಾಶಿ ನಮ್ಮನ್ನು ಕಳುಹಿಸಲು ಬಂದು ಬಸ್ಟ್ಯಾಂಡಿನಲ್ಲಿ ಮುಖ ಸಪ್ಪೆ ಮಾಡಿಕೊಂಡು ನಿಲ್ಲುವುದನ್ನು ನೆನಪಿಸಿಕೊಂಡರೆ ಈಗಲೂ ಮರುಕು ಹುಟ್ಟುತ್ತದೆ. ಲಂಕೇಶರ ಹಾಡು ಎದೆ ಇರಿಯುತ್ತದೆ
`ಎಲ್ಲಿದ್ದೆ ಇಲ್ಲೀ ತನಕ
ಎಲ್ಲಿಂದ ಬಂದೆವ್ವಾ'

         ಮತ್ತೊಂದು ಬೇಸಿಗೆ ರಜೆಗೆ ಹೋದಾಗ ಎದುರುಗೊಳ್ಳಲು ಕಾಶಿ ಬರಲಿಲ್ಲ. ತೋಟದ ಮೆನೆಗೆ ಹೋದರೆ ಅಲ್ಲಿಯೂ ಇರಲಿಲ್ಲ. ಮೇಲೆ ಗೊತ್ತಾಯಿತು ಕಾಶಿ ಸತ್ತು ಹೋಗಿದೆ ಎಂದು. ಛೇ! ನಾನು ನಿಮಗೆ ಹೇಳಬೇಕಾದುದೇ ಬೇರೆ, ಹೇಳುತ್ತಿರುವುದೇ ಬೇರೆಯಾಯಿತೇ? ಮೂರು ದಶಕಗಳ ಶಬ್ಧ ಸಂಸಾರದಲ್ಲಿ ಸಾಗಿಹೋದ ನನಗೆ ಕೆಲವೊಮ್ಮೆ ಹಾಗೆ ಅನ್ನಿಸುವುದೇ ಇಲ್ಲ. ಎಲ್ಲವೂ ಎಲ್ಲೋ ಒಂದೆಡೆ ಒಂದೇ ಆಗಿದೆ. ಕಥೆ0iÉುೀ ಆಗಿದೆ. ಈಗಾಗಲೇ ಹೇಳಿದಂತೆ ನಾಯಿಯ ಹೆಸರು ಮತ್ತು ನನ್ನ ಅಜ್ಜಿಯ ಹೆಸರು ಒಂದೇ ಆಗಿರುವುದರಿಂದ ಇಷ್ಟೆಲ್ಲ ಹೇಳಬೇಕಾಯಿತೇನೊ. ಬರೀ ಹೆಸರು ಒಂದಾಗಿದ್ದರೆ ಇಷ್ಟು ವಿವರಣೆ ನೀಡುವ ಅವಶ್ಯಕತೆ ಇರಲಿಲ್ಲ. ಹೆಸರನ್ನು ಮೀರಿ ಇಡೀ ಬದುಕನ್ನೇ ಒಂದು ಸಿದ್ಧಾಂತಕ್ಕಾಗಿ ನಿಸ್ವಾರ್ಥದ ಗಾಳಿಪಟದಂತೆ ಹಾರಿಸಿ ಬಿಟ್ಟಾಗ ಅವರ ಕುರಿತು ಮಾತೂ ಮಹಾಕಾವ್ಯವಾಗುತ್ತದೆ.


         ಈ ಬದುಕಿನ ಮಿತಿಯೇಇದು? ಅಥವಾ ದುರಂತವೋ? ಅಜ್ಜಿ ತೀರಿದ ಮೇಲೆ ನನ್ನವ್ವನ ಊರಿಗೆ ಹೋಗುವುದೇ ಅಪರೂಪವಾಯಿತು. ಖಂಡಿತ ನಮಗಾಗಿ ಹಸಿಯದ ಜೀವ ಇಲ್ಲ ಎನ್ನುವುದಾದರೆ ಯಾವ ಊರಿನ ಗತಿಯೂ ಅಷ್ಟೆ. ನನ್ನಜ್ಜಿಯಂತೂ ಒಂದು ಜನ್ಮಗಳೂ ಅಳಿಸಿ ಹಾಕಲಾಗದ ವಿಚಿತ್ರ ಜೀವ. ಅವಳಿಗಾಗಿ ಹಂಬಲಿಸಿ ನಾನೆಂದೂ ಊರಿಗೆ ಹೋಗದಿದ್ದರೂ ಅವಳ ಊರು ಮಾತ್ರ ನನಗೆ ಜನ್ಮಕ್ಕೆ ಸಾಕೆನ್ನುವಷ್ಟು ಅನುಭವಗಳ ಬುತ್ತಿ ಕಟ್ಟಿಕೊಟ್ಟಿದೆ. ಅಬ್ಬಾ! ಕಾಡು ಮಲ್ಲಿಗೆಯಂಥ ನನ್ನಜ್ಜಿಗೆ ಎಂಥ ಸಂಭ್ರಮದ ಬಾಳು, ಕೈಗೊಂದು-ಕಾಲಿಗೊಂದು ಆಳು, ಊರ ತುಂಬ ಮಾತು ಹಬ್ಬದ ಗೆಳತಿಯರುಒಂದರ್ಥದಲ್ಲಿ ಅವಳೆಂದರೆ ಊರೇ. ಅಥವಾ ಹೀಗೆನ್ನಿ- ಊರೆಂದರೆ ಇವಳೇ.

           ಈಗ ಅವಳು ತೀರಿ ಬರೋಬ್ಬರಿ ನಾಲ್ಕು ವರ್ಷ. ಈಗಲೂ ನಾಲ್ಕಾರು ಬಾರಿ ನಾನು ಅವಳ ನೆನಪು ಕೆದಕುತ್ತ ಅತ್ತ ಹೋಗಿ ಬಂದಿರಬಹುದು. ಒಂದು ಕ್ಷಣ, ಏರಿಯ ಮೇಲಿನ ಆಕೆಯ ಊರ ಬಸ್ಟಾಂಡಿನೊಳಗೆ ಇಳಿದು ಪಕ್ಕದಲ್ಲಿಯೇ ಇರುವ ಸ್ಮಶಾನದೊಳಗಿನ ಆಕೆಯ ಸಮಾಧಿಯನ್ನು ಕಂಡು ಮನೆಯ ಕಡೆ ಹೊರಟಾಗ ಎಂದೋ ಹೀಗೊಂದು ಕವಿತೆ ಹರಳುಗಟ್ಟಿತು-





"ಒಲೆಗೆ ಬೆಂಕಿಯಿಡದೆ
ಮೊಲೆಗೆ ನಾಚಿಕೆ ಪಡದೆ
ಹಡೆದದ್ದೇ ಹುಡುಗಾಟಕ್ಕೆನ್ನುವಂತಿದ್ದ,
ಅಜ್ಜ ಮುಟ್ಟಿದ ಮೈಗಳಿಗೆಲ್ಲ
ಉಡಿಯಕ್ಕಿ ಹಾಕಿ ಪಗಡಿಯಾಡಿದ್ದ
ನನ್ನಜ್ಜಿ
ಈಗ ಹೇಸಿಗೆಯ ಹೊರೆ ಇಳಿಸಿ
ಸಂತೆ ಗೆದ್ದು ನಿಶ್ಚಿಂತಳಾದಳು"

      ಊರೊಳಗೆ 'ದೊಡ್ಮನೆ' ಕಾಶಿಬಾಯಿ ಎಂದೇ ಖ್ಯಾತಳಾಗಿದ್ದ ನನ್ನಜ್ಜಿ ಮನೆತನದ ಹೆಸರಿಗೆ ಒಂದು ಅಪವಾದದಂತಿದ್ದಳು. ಕರ್ರನೆಯ ಬಣ್ಣ, ದೇಹ ಅತೀ ಸಣ್ಣ. ಪೀಚಲು ಪಾತ್ರ. ಆದರೆ ಇವಳೆಂದರೆ ಬರೀ ಮಾತು. ಹೀಗೆ ಏನೆಲ್ಲ ನೆನಪುಗಳ ಸುರುಳಿ ಬಿಚ್ಚುತ್ತಾ ಮನೆಯಲ್ಲದ ಮನೆ ಮುಟ್ಟಿದಾಗ ಮೂರು ಸಂಜೆ. ಹುಟ್ಟಿದೂರಿನಲ್ಲಿ ಹೊರಗಿನವನಂತೆ ಹೊರಟ ನನ್ನನ್ನು ನೋಡಿ ಅಲ್ಲಲ್ಲಿ ಹೆಂಗಸರು, ಒಳಗೊಳಗೇ ದೊಡ್ಮನೆ ಕಾಶಿಬಾಯಿ ಮೊಮ್ಮಗ ಇರಬಹುದು ಎಂದಾಡುತ್ತಿದ್ದ ಮಾತುಗಳು ಕಿವಿಗಪ್ಪಳಿಸುತ್ತಿದ್ದವು

       ಧೂಳು, ಧೂಳಾದ ಊರಿನ ದಾರಿ ಕ್ರಮಿಸಿ, ಮನೆ ಮುಟ್ಟಿ ಮುಖಮಾರ್ಜನೆ ಮಾಡಿಕೊಂಡು ಹೊರಗಡೆ  ಬಂದು ಕುಳಿತರೆ ಕಾಡುವ ಎರಡು ವಸ್ತುಗಳು- ಒಂದು ಕರಿಕಲ್ಲಿನ, ದೊಡ್ಡ ಬಾಗಿಲಿನ, ಈಗ ಸಂಪೂರ್ಣ ಹಾಳು ಬಿದ್ದ ನನ್ನಜ್ಜಿಯ ಮನೆ; ಇನ್ನೊಂದು ಐದು ಗಡಗಡಿಯ ಕಲ್ಲಿನಲ್ಲೇ ಕಟ್ಟಿದ ವಿಶಾಲ ಬಾವಿ. ಒಂದು ಕಾಲಕ್ಕೆ  ನನ್ನಜ್ಜಿಯ ಮನೆಯ ಪಕ್ಕದ್ದೇ ಬಾವಿ. ಆದರೆ ಈಗ ಸ್ವಲ್ಪ ದೂರ ದೂರವಾಗಿವೆ. ಯಾಕೆಂದರೆ ಇವೆರಡರ ಮಧ್ಯದಲ್ಲಿದ್ದ ತಿಪ್ಪೆಯಲ್ಲಿ ಹೊಸದಾಗಿ ಒಂದು ಗಿರಣಿ ಹುಟ್ಟಿಕೊಂಡಿದೆ. ಸಣ್ಣ ಊರಿನ ಸಂದಿ-ಸಂದಿಗಳಲ್ಲೆಲ್ಲ ನಲ್ಲಿಗಳು ಬಂದು ಹಳೆಯ ಬಾವಿ ಅನಾಥವಾಗಿದೆ. ಆಳವಲ್ಲದ ಭಾವಿಯ ಅಳಿದುಳಿದ ನೀರು ಮಲೆತು, ಗಣಾಚೌತಿಯಲ್ಲಿ ಗಣೇಶನಿಗೆ ಮೋಕ್ಷ ತೋರಿಸುವ ಆತ್ಮಹತ್ತ್ಯಾ ಕೇಂದ್ರವಾಗಿದೆ ಅಷ್ಟೆ. ನಸುಕಿನ ಮೂರು ಗಂಟೆಯಾದರೆ ಸಾಕು ಕೀರಿಡಲು ಸುರುವಾಗುತ್ತಿದ್ದ ಬಾವಿಯ ಗಡಗಡೆಗಳೆಲ್ಲ ಬೆಳಗಾಗುವುದರಲ್ಲಿ ಬೆವಿಯುತ್ತಿದ್ದವು, ಆದರೆ ಈಗ ತುಕ್ಕು ಹಿಡಿದಿವೆ. ಒಂದು ಕಾಲಕ್ಕೆ ಎಂಥ ರೋಮಾಂಚನದ ಕೇಂದ್ರವಾಗಿತ್ತು ಬಾವಿ. ಹೊಸದಾಗಿ ಬಂದ ಸೊಸೆಯಂದಿರು, ಆಗಷ್ಟೆ ಮೈನೆರೆದ ಹುಡುಗಿಯರು, ಮೈ ಮೂಲೆ ಮೂಲೆಗೂ ಮುಪ್ಪು ವಕ್ಕರಿಸಿದ್ದರೂ ದೇವರಿಗೆ ಮಡಿ ನೀರೇ ಬೇಕೆಂದು ಬರುತ್ತಿದ್ದ ಮುದುಕಿಯರು, ಹುಡುಗಿಯರ ಹೊಸ ಮುಖಗಳಿಗೆ ಹಸಿ ಹೆಚ್ಚಿಸಿಕೊಂಡು ಅಲ್ಲಿಂದಲೇ ಕಾಯುತ್ತ ಕುಳಿತಿರುತ್ತಿದ್ದ ಚಪಲ ಚನ್ನಿಗರಾಯರು, ಅಯ್ಯೋ, ನೆನಪುಗಳಿಗೆ ಬರವಿಲ್ಲ ಬಿಡಿ. ಆದರೆ ಈಗ ರಂಡೆ-ಮುಂಡೆಯರಂತೆ ಹಾಳು ಹೊಡೆಯುತ್ತಿದೆ ಬಾವಿ. ಊರಿಗೆ ಬಂದವಳು ನೀರಿಗೇ ಬರುತ್ತಿಲ್ಲ. ಇದನ್ನು ನೆನೆದು ನಾನೇ ಬರೆದ ಕವಿತೆ-
ನೀರೆ-ನಿರಿಗೆ



                                                               ಈಗ
ಅಜ್ಜಿಯ ಊರಲ್ಲಿ
ಗೆಜ್ಜೆಯ ಸದ್ದೇ ಇಲ್ಲ

ಎಲ್ಲ ಹಾಳು-ಬೀಳು, ಧೂಳು
ಬೆಳದಿಂಗಳಿಗೆ
ಬಾಯ್ತೆರೆದು ಮಲಗಿದರೆ
ಕೇಳುವ ಧ್ವನಿ ಗೋಳು

ಈಗ ಎಲ್ಲ ಹೀಗೆ
ಇಣುಕಿ ನೋಡಿದರೆ
ಅವರವ್ವನನ್ನು ನುಂಗಿ ನೀರು ಕುಡಿದ
ಬಾವಿಯ ಬಾಯಿಗೇ
ಈಗ ಬೋರ್ ನೀರಿನ ಜೀವದಾನ
ಗಡಗಡಿಗಳು ತುಕ್ಕಾಗಿ
ಕೊಡದ ಕಟ್ಟೆಗಳೆಲ್ಲ ಒಡೆದು ಹೋಗಿ
ಬಾವಿ ಈಗ
ಗಣೇಶನ ಆತ್ಮ ಹತ್ಯೆಯ ಸ್ಥಳವಷ್ಟೆ
ಕೊಳೆತು
    ಕಪ್ಪಿಟ್ಟ ನೀರೊಳಗೆ
ಬಿಂದಿಗೆಗಾಗಿ ಬಾಗಿದ
ಗೆಳತಿಯರ ನೆರಳಿಲ್ಲ
ಕಲ್ಲು ಕಲ್ಲಿನ ಮೇಲೆ ಬಿದ್ದ
ಬಳೆಚೂರು ಕಳೆದುಕೊಂಡಿವೆ ಎಲ್ಲ

ಸತ್ತು ಸ್ವರ್ಗ ಸೇರದೆ
ಊರು ಸೇರಿದ ಅಜ್ಜಿಗೆ ಹೇಳಬೇಕಿದೆ ನಾನು
ಊರಿಗೆ ಬಂದವಳು ನೀರಿಗೆ ಬರುತ್ತಿಲ್ಲ ಅಜ್ಜಿ
ನೀರಿಗೇ ಬರದವಳು
ಎದೆಯ ಮೇಲೊಂದು ನಿರಿಗೆ

ಹಾಕುವುದು ಹ್ಯಾಗೆ ಅಜ್ಜಿ?'’

 --------------------------------------------------------------------- (ಸಶೇಷ, ನಿರೀಕ್ಷಿಸಿ-ಭಾಗ-೨)














   

Sunday 13 October 2013

ದಸರೆಯಲ್ಲಿ ದಾಸಯ್ಯ

 12/10/13 ರಂದು  ದಸರಾ ಕವಿಗೋಷ್ಠಿಗೆ ಅಹ್ವಾನಿತನಾಗಿ ಹೋಗಿದ್ದೆ. ನಾನು ವಾಚಿಸಿದ ` ದಸರೆಯಲ್ಲಿ ದಾಸಯ್ಯ’ ಕವಿತೆಯ ವಿಡಿಯೋ ತುಣುಕು ನಿಮಗಾಗಿ...

 https://plus.google.com/114621774015207597475/posts/7i7fq8vXvcF

Sunday 15 September 2013

ಕೌದಿಯಂತೆ ಕಾವ್ಯ !!!





ಕೌದಿಯ ಒಂದು ಭಯಾನಕ ಕಥೆ. ಚಿಕ್ಕವನಿದ್ದಾಗ ಕೇಳಿ ನಾ ಬೆಚ್ಚಿ ಬಿದ್ದಿದ್ದೆ. ನನ್ನ ತಾಯಿಯ ತವರಿನಲ್ಲಿ ನನ್ನದೇ ವಯಸ್ಸಿನ ಹುಡುಗನೊಬ್ಬನಿಗೆ ಹುಚ್ಚು ನಾಯಿ ಕಡಿದಿತ್ತಂತೆ. ವೈದ್ಯಕೀಯ ಸೌಲಭ್ಯಗಳಿಲ್ಲದ ದಿನಗಳಲ್ಲಿ ಹಳ್ಳಿಗರಿಗೆ ಔಷಧಿಗಳ ಬಗೆಗೆ ಏನು ಮಾಹಿತಿಗಳಿರಲಿಲ್ಲ. ಇರುವ ಔಷಧಿಗಳೂ ಅವರ ಆರ್ಥಿಕ ಸ್ಥಿತಿಗೆ ದಕ್ಕುವಂತಿರಲಿಲ್ಲ. ಹುಚ್ಚುನಾಯಿ ಕಡಿದ ಹುಡುಗ ನೆರೆ-ಹೊರೆಯ ಒಂದಿಬ್ಬರನ್ನು ಕಚ್ಚಿಬಿಟ್ಟ. ಮನುಷ್ಯನಂತಿದ್ದರೂ ನಾಯಿ ಕಡಿತದಿಂದಾಗಿ ದಿನವೆಲ್ಲ ಬೊಗಳುತ್ತಾ, ಗುರಾಯಿಸುತ್ತಾ, ಜೊಲ್ಲು ಸುರಿಸುತ್ತಾ, ಗೋಡೆಗೆ ಹೊಡೆದುಕೊಂಡು ತಲೆಯಿಂದ ರಕ್ತ ಸುರಿಸಿಕೊಳ್ಳುತ್ತಾ ಇರುತ್ತಿದ್ದ ಆತನ ಬಗೆಗೆ ಚಿತ್ರ-ವಿಚಿತ್ರ ಕಥೆಗಳು ಹುಟ್ಟಿಕೊಂಡವು. ಆತನ ಉಪಟಳವನ್ನು ತಾಳದೆ, ಜೊತೆಗೆ ಹಳ್ಳಿಗರಿಂದ ಬರುವ ಟೀಕೆ, ಅಪಮಾನ, ಒತ್ತಡಗಳಿಂದ ಮುಕ್ತರಾಗಲು ಬಯಸಿದ ಹುಡುಗನ ತಂದೆ-ತಾಯಿಗಳು ಕೌದಿಯನ್ನು ನೀರೊಳಗೆ ಅದ್ದಿ, ಮುಖದ ಮೇಲೆ ಹೊಚ್ಚಿ ಆತನನ್ನು ಕೊಂದುಬಿಟ್ಟರಂತೆ. ಇದು ಹಸಿ ಕೌದಿಯ ಕತೆ.
ರಜೆಯಲ್ಲಿ ನಮ್ಮಜ್ಜನ ಊರಿಗೆ ಹೋಗುತ್ತಿದ್ದೆವು. ಅಜ್ಜನ ಊರೆಂದರೆ ಹರಕು ಬಾಯಿ, ಹರಕು ಕಚ್ಚೆ, ಹಾಗೆಯೇ ಹರಕು ಕೌದಿಗಳ ಮಹಾ ಸಾಮ್ರಾಜ್ಯ. ಕೌದಿಗಳ ಭಂಡಾರ. ಮುಖಕ್ಕೆ ಬರುವ ಕೌದಿ ಕಾಲಿಗೆ ಬರುತ್ತಿರಲಿಲ್ಲ. ಕಾಲು ಕಾಯುವ ಕೌದಿ ಮುಖ ಮುಚ್ಚುತ್ತಿರಲಿಲ್ಲ. ಮಧ್ಯ-ಮಧ್ಯ ಇಡೀ ಆಕಾಶ ದರ್ಶನ ಮಾಡಿಸುವ ಕಿಂಡಿಗಳು, ಹುರುಕಿನಿಂದ ನರಳುತ್ತಿದ್ದ ನನ್ನ ತಮ್ಮನೊಬ್ಬನ ಕುಂಡಿಗಂತೂ ಕೌದಿಯೇ ಎಲ್ಲವೂ. ಅಕೀತಿ(ಅಕ್ಷಯ ತೃತಿಯ)ಊರ ಬಸವಣ್ಣನ ಜಾತ್ರೆಯಲ್ಲಿ ದೊಡ್ಡಾಟ ನೋಡುವಾಗಲಂತೂ ನಮ್ಮ ಠಿಕಾಣಿ ಕೌದಿ ಇದ್ದವರ ಪಕ್ಕದಲ್ಲಿಯೇ. ಅತ್ತ ದೊಡ್ಡಾಟ ಶುರುವಾಗಬೇಕು, ಮೆಲ್ಲಗೆ ನಾವಿತ್ತ ಕೌದಿಯ ಬಿಸುಪಿಗೆ ಶರಣಾಗಬೇಕು. ಅಂದಹಾಗೆ, ಮಳೆಗಾಲದ ರಾತ್ರಿಗಳಲ್ಲಿ ಅಂಗಳದಲ್ಲಿ ಮಲಗಿರುತ್ತಿದ್ದ ನಮ್ಮ ಕೌದಿಗಳು ತೋಯ್ದು ನಾವು ಮುಖದ ಮೇಲೆ ಹೊದ್ದುಕೊಂಡು ಹಾಗೆ ಮಲಗಿರುತ್ತಿದ್ದರೆ, ಹಿರಿಯರು ಬಂದು ಅವುಗಳನ್ನು ಮುಖದ ಮೇಲಿಂದ ಸರಿಸಿಹೋಗುತ್ತಿದ್ದರು. ಯಾಕೆಂದರೆ ಹುಚ್ಚುನಾಯಿ ಕಡಿದವನಂತೆ ನಾವು ಉಸಿರುಗಟ್ಟಿ ಸತ್ತುಹೋಗಬಹುದೆಂಬುದೇ ಅವರ ಚಿಂತೆ(?). ಇವು ಕೌದಿಯ ನೆನಪಿನ ಕೆಲವು ಝಲಕುಗಳು ಅಷ್ಟೇ.
  ಗೊತ್ತಿರಲಿ, ಕೌದಿಯಂತೆಯೇ ಕಾವ್ಯ, ನಿಮಗೆ ಯುವಕಬಿ ಜಾನ್ಕೀಟ್ಸ್ ಬಗೆಗೆ ಅದೇನು ಗೊತ್ತೊ ನನಗೆ ಗೊತ್ತಿಲ್ಲ. ಈತ ಮಹಾನ್ ವ್ಯಸನಿ. ಕಾವ್ಯ, ಪ್ರೀತಿ ಮತ್ತು ಕಲ್ಪನೆಗಳ ಮಹಾನ್ ವ್ಯಸನಿ. ಕೌದಿಗಾಗಿ ಬಟ್ಟೆ ಪೇರಿಸುವ ಹೆಂಗಸಿನಂತೆ, ಕಾವ್ಯ ಎನ್ನುವ ಕೌದಿಗಾಗಿ ಎಂತೆಂತಹ ಜೀವನಾನುಭವಗಳನ್ನು ಪೇರಿಸಿಟ್ಟಿದ್ದ ಹುಡುಗ ಕೊನೆಗೆ ಅದರೊಳಗೇ ಉಸಿರುಗಟ್ಟಿ ಸತ್ತ. ಕಾವ್ಯಕ್ಕಾಗಿ ಪ್ರಾಣವನೇ ತೆತ್ತ.  
ವಿಶೇಷ ನೋಡಿ, ನಮ್ಮ ತಾಯಿಯ ಸುತ್ತ ಕೌದಿ ಹೊಲೆಯುವವರ ದೊಡ್ಡ ಬಳಗವೇ ಇತ್ತು. ಟೇಲರ್ ಅಂಗಡಿಗಳ ಸುತ್ತ, ಸುತ್ತಿ ಸುತ್ತಿ ನಿರುಪಯುಕ್ತವಾಗಿ, ಕಾಲುಕಸವಾಗಿ, ತುಂಡು ತುಂಡಾಗಿ ಬೀಳುತ್ತಿದ್ದ ಬಣ್ಣ ಬಣ್ಣದ ಬಟ್ಟೆಗಳನ್ನು ತಂದು ಸಂಗ್ರಹಿಸಿ, ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗಾಗಿಯೂ ಕೌದಿ ಹೊಲಿಸುವ ತಾಯಂದಿರ ಗುಂಪಿನಂತೆ, ದಂಡು-ದಂಡಾದ ಕೌದಿ ಹೊಲೆಯುವ ಅಜ್ಜಿಯರ ಗುಂಪೂ ಇತ್ತು. ಇಬ್ಬರು ಮೂವರು ಇಂಥವರು ಸೇರಿಕೊಂಡು, ಬಣ್ಣ ಬಣ್ಣದ ತುಂಡುಗಳನ್ನು ಅಂದ-ಚಂದವಾಗಿ ಜೋಡಿಸಿ, ಅವುಗಳ ಮೇಲೆಯೇ ಗುಬ್ಬಿ ಕಾಲು, ಬಾವಿ, ಪಗಡಿಯಾಟದ ಚೌಕಾ, ನಕ್ಷತ್ರಗಳ ಹಿಂಡು, ಏನೆಲ್ಲ ಮೂಡಿಸುತ್ತಿದ್ದ ಅವರ ಕಲ್ಪನೆ, ಧ್ಯಾನಸ್ಥತೆ, ನನ್ನನ್ನು ಇಂದಿಗೂ ಎಷ್ಟೊಂದು ಕಾಡುತ್ತವೆ. ಶಾಲೆಗೆ ಹೋಗಬೇಕಾದ ಅವಸರದಲ್ಲಿಯೂ ಅದನ್ನು ಮರೆತು ಕೌದಿ ಹೊಲೆಯುವ ಕಾಡು ಹೆಂಗಸರ ಮುಂದೆ ಕುಕ್ಕುರುಗಾಲಿನಲ್ಲಿ ಕುಳಿತು ಬೈಯಿಸಿಕೊಂಡ ನೆನಪಿದೆ ನನಗೆ. ಆದರೆ ಈಗನಿಸುತ್ತಿದೆ, ಬಹುತೇಕ ಇಲ್ಲೇ ಎಲ್ಲೋ ನನ್ನ ಕಾವ್ಯದ ಒಳ ಬೇಗುದಿ ಮಾಗುವ ಪರಿ ಶುರುವಿಟ್ಟುಕೊಂಡದ್ದು. ಅಂದು ಅಂತರ್ಮುಖಿಯಾದುದು ಇಂದು ಬಹಿರಂಗವಾಗಿ ಪ್ರಕಟಗೊಳ್ಳುತ್ತಿದೆ ಎನ್ನಬಹುದೇ? ಗೊತ್ತಿಲ್ಲ.
 ನನ್ನ ಕಬೋರ್ಡುಗಳಲ್ಲಿ ಬೇರೆ ಬೇರೆ ಭಾಷೆ, ದೇಶ, ಸಂಸ್ಕೃತಿಗಳಿಗೆ ಸಂಬಂಧಪಟ್ಟ ಹಲವು ಪ್ರಕಾರದ ಪುಸ್ತಕಗಳು ಇರುವಂತೆಯೇ ನನ್ನೊಂದಿಗೆ ಕೌದಿಗಳೂ ನಿರಂತರ ಸಾಗಿಬಂದಿವೆ. ರೈತಾಪಿ ಹಿನ್ನೆಲೆಯ ನನ್ನ ಇಬ್ಬರೂ ಅಜ್ಜಂದಿರ ಮನೆಗಳಲ್ಲಿ ಕೌದಿ ಇಲ್ಲದೆ ಕಳೆದ ನನ್ನ ಬಾಲ್ಯದ ದಿನಗಳೇ ಇಲ್ಲ. ಉತ್ತರ ಕರ್ನಾಟಕದ ಕಡು ಬೇಸಿಗೆಯ ನಮ್ಮೂರುಗಳಲ್ಲಿ ಯಾರ ಮಾನೆಯಲ್ಲಿಯೂ ಕೌದಿ ಇರಲಿಲ್ಲ ಎಂದು ಹೇಳಲಾಗದು. ಅದೊಂದು ರೀತಿ ಸಾವಿಲ್ಲದವರ ಮನೆಯಿಂದ ಸಾಸಿವೆ ತರುವ ಹುಚ್ಚು ಯತ್ನ. ಹರಿದ ಕೌದಿ, ಹೊಲಸು ಕೌದಿ, ಹುಟ್ಟಿನಿಂದ ಸಾವಿನವರೆಗೆ ನೀರೇ ಕಾಣದ ಕೌದಿ, ಮುಪ್ಪಿಗೆ ಕೊನೆಯ ಆಸರೆಯಾಗಿ, ಅಂತ್ಯಸಂಸ್ಕಾರದಲ್ಲೂ ಸಂಗಾತಿಯಾಗಿ ಚಿತೆ ಏರಿದ ಕೌದಿ, ಹೊಸ ಸಂಸಾರಗಳ ಹೊಚ್ಚಿಟ್ಟ ಕೌದಿ,ಸುರಗಿಯೊಳಗೆ ಶೃಂಗಾರಗೊಂಡ ಕೌದಿ, ಮಕ್ಕಳು-ಮೊಮ್ಮಕ್ಕಳ ದೀಪ ಹಚ್ಚಿಟ್ಟ ಕೌದಿ, ಅಬ್ಬಬ್ಬಾ!! ಎಷ್ಟೊಂದು ಬಗೆ ಕೌದಿ. ಎಷ್ಟೊಂದು ಸೊಗಸಾದ ಬದುಕು. ನಿಜಕ್ಕೂ ಒಂದರ್ಥದಲ್ಲಿ ಕೌದಿ ಎಂದರೆ ಬದುಕೇ ಹೌದು.
ತುಂಡು ತುಂಡುಗಳ ಮಧ್ಯದ ಬೆಸುಗೆಯಿಂದ ಹುಟ್ಟುವ ಕೌದಿ ಮಾತ್ರ ಬರೀ ತುಂಡಲ್ಲ. ಅದು ಅಖಂಡ. ಅದು ಅಪೂರ್ಣವಲ್ಲ. ಪೂರ್ಣ-ಸಂಪೂರ್ಣ. ಅದಕ್ಕೆ, ಹೇಳಿದೆ ಕೌದಿ ಕವಿತೆಯಂತೆ ಅಥವಾ ಕವಿತೆ ಕೌದಿಯಂತೆ. ಹೇಗಾದರೂ ಅಂದುಕೊಳ್ಳಿ. ಕವಿತೆ ಹುಟ್ಟಿಕೊಳ್ಳುವುದು ಕೌದಿಯಂತೆಯೆ. ಮುಂದೊಮ್ಮೆ ಸಿದ್ಧವಾಗಬಹುದಾದ ಕೌದಿಗಾಗಿ ಎಂದೋ ಬಣ್ಣ ಬಣ್ಣದ ಬಟ್ಟೆಯ ತುಂಡುಗಳು ಸಂಗ್ರಹವಾಗುವಂತೆಯೇ ಕಾವ್ಯದ ಸಾಮಗ್ರಿಯೂ ಹಲವು-ಕಾಡುವ ನೆನಪು, ಸಂವೇದನೆ, ಗಾಯ, ರಮಿಸುವಿಕೆ, ಅಚ್ಚರಿ, ಆಲೋಚನೆ ಹೀಗೆ ಏನೆಲ್ಲ ಸ್ವರೂಪದಲ್ಲಿ ನಮ್ಮೊಳಗೆ ಸಂಗ್ರಹವಾಗತೊಡಗುತ್ತವೆ. ಹೀಗೆ ಕೌದಿಯಂತೆ ಒಂದೊಮ್ಮೆ ಕವಿತೆಯಾಗಿ ಒಡಮೂಡುತ್ತದೆ. ಆಗ ಹುಟ್ಟಿಕೊಂಡದ್ದು ನನ್ನ ಇರುವಷ್ಟು ಕಾಲ... ಇರುವಷ್ಟೇ ಕಾಲ!.
ಕೌದಿಗಾಗಿ ಸಂಗ್ರಹವಾದ ತುಂಡುಗಳಂತೆ ಸಂಕಲನದ ನನ್ನ ಸಂವೇದನೆಗಳು 2009 ರಿಂದ 2013ವರೆಗೆ ನಿರಂತರ ಸಂಗ್ರಹಗೊಂಡು ಈಗ ನಿಮ್ಮ ಕೈಯಲ್ಲಿವೆ. ಇಲ್ಲಿಯ ಅನೇಕ ಕವನಗಳು ಕಾಲ ಕಾಲಕ್ಕೆ ನಾಡಿನ ಅನೇಕ ಪತ್ರಿಕೆಗಳಲ್ಲೂ ಪ್ರಕಟಗೊಂಡಿವೆ. ಗುಂಡು, ಗೆಳೆಯ-ಗೆಳತಿಯರ ತೀರ ಖಾಸಗಿ ಗೋಷ್ಠಿಗಳಲ್ಲಿ ಹಾಡಲ್ಪಟ್ಟಿವೆ, ಓದಲ್ಪಟ್ಟಿವೆ, ಹೇಳಲ್ಪಟ್ಟಿವೆ ಹೀಗೆ ಏನೆನೋ.
ಅಂದಹಾಗೆ ಮುಖಪುಟಕ್ಕಾಗಿ ನಮ್ಮ ಬೇಲೂರಿನ ಪಕ್ಕದ ವಿಜಯದುರ್ಗದ ಮರವೊಂದರ ಪೆÇೀಟೊವನ್ನು ಇಲ್ಲಿ ಬಳಸಿಕೊಂಡಿದ್ದೇನೆ. ನಾನೇನು ವೃತ್ತಿಪರ ಫೆÇೀಟೊಗ್ರಾಫರ್ ಅಲ್ಲದಿದ್ದರೂ ಹೆಚ್ಚು-ಕಡಿಮೆ ಬರಹವನ್ನೇ ವೃತ್ತಿಯಾಗಿಸಿಕೊಂಡಿರುವ, ನನ್ನ ಕಲ್ಪನೆಗೆ ಸಮೀಪವೆನಿಸುವ ಕೆಲವು ಚಿತ್ರ, ಭಂಗಿ, ಬದುಕುಗಳನ್ನು ಕ್ಯಾಮರಾದ ಕಣ್ಣೊಳಗೆ ಸೆರೆಹಿಡಿಯುವ ಹವ್ಯಾಸವನ್ನು ಇತ್ತಿಚಿಗೆ ರೂಢಿಸಿಕೊಳ್ಳುತ್ತಿದ್ದೇನೆ. ವಿಚಿತ್ರ ಗೊತ್ತೆ? ವಿಜಯದುರ್ಗದ ಬೋಳು ಮರಕ್ಕೆ ಸಂಕಲ್ಪವೃಕ್ಷ ಎಂದು ಬೇರೆ ಬೋರ್ಡು ನೇತುಹಾಕಿದ್ದಾರೆ. ವಿಪರ್ಯಾಸವೆಂದರೆ ಇದೇ ಇರಬಹುದು, ಅಲ್ಲವೇ? ನೀವು ಎತ್ತಕಡೆಯಿಂದ ನೋಡಿದರೂ ಹಸಿರು ಕಾಣದ, ವಿಶಾಲ ಬೊಡ್ಡೆಯ ಆಕಾಶದೆತ್ತರದ, ಅಸಂಖ್ಯಾತ ರೆಂಬೆ ಕೊಂಬೆಗಳ  ಮರದಲ್ಲಿ ಹಕ್ಕಿ ಪಕ್ಷಿಗಳು ಮಾತ್ರ ಗೂಡು ಕಟ್ಟಿವೆ. ನಿತ್ಯ ಮನುಷ್ಯರು ಓಡಾಡಿ ಸಾಯಬೇಕಾದ ಕಾಲ್ದಾರಿಗಳ ಮೇಲಿನ ಹುಲ್ಲು ಗರಿಕೆಯನ್ನೂ ಹಠÀ ತೊಟ್ಟು  ಹಸಿರಾಗಿಸುವ ಮಲೆನಾಡು ಅದ್ಯಾವ ಕಾರಣಕ್ಕೆ ಮರವನ್ನು ತನ್ನ ಮಡಿಲಲ್ಲಿ ಹಾಕಿಕೊಳ್ಳಲಿಲ್ಲವೊ?
ಸಂಕಲನದ ಹಲವಾರು ಕವಿತೆಗಳಲ್ಲಿ ನನ್ನ ಮರ ಮರಮರಿಸುತ್ತದೆ, ಮಾತಾಡುತ್ತದೆ, ಮತ್ತು ಕವಿತೆಯಾಗಿ ಕರಗುತ್ತಲೇ ಮರಗುತ್ತದೆ. ಮರವಿಲ್ಲದ ಮನುಷ್ಯರ ಸಂಸಾರ ಎಷ್ಟು ಭೀಕರವಾಗಿರುತ್ತಿತ್ತು ಎಂದು ಬೆಚ್ಚಿಬೀಳುವಂತಾಗಿಸುತ್ತದೆ.