Friday 27 June 2014

ಈ ಸಾವೂ ಒಂದು ಸುಂದರ ಪಯಣ

   ಅಥೇನ್ಸ್‍ನಲ್ಲಿ ಹುಟ್ಟಿದ ಸಾಕ್ರೆಟೀಸ್ ಶ್ರೇಷ್ಠ ತತ್ವಜ್ಞಾನಿ. ತನ್ನ ಜೀವನಾವಧಿಯ ಕೊನೆಯ ಮೂವತ್ತು ವರ್ಷಗಳನ್ನು ಅಥೇನ್ಸ್‍ದ ಪ್ರಜೆಗಳಿಗೆ ಕೆಲವು ಸತ್ಯಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಕಳೆದಿದ್ದಾನೆ. ಪ್ರಪಂಚ ಕಂಡ ಅದ್ಭುತ ಚಿಂತಕ ಸಾಕ್ರೆಟಿಸ್. ತನ್ನ ಜನರ ಅಜ್ಞಾನದಿಂದಾಗಿ ವಿಷಪ್ರಾಶಾಣಕ್ಕೊಳಗಾಗಿ ಮರಣ ಹೊಂದಿದ. ಆದರೆ ಸಾವಿನ ಕೊನೆಯ ಕ್ಷಣದವರೆಗೂ ಸತ್ಯದೊಳಗಿನ ಆಸಕ್ತಿಯನ್ನು ಎಂದೂ ಕಳೆದುಕೊಳ್ಳಲಿಲ್ಲ. ಬದುಕನ್ನು ಪಣಕ್ಕೊಡ್ಡಿ ಸತ್ಯವನ್ನೇ ಸ್ಥಾಪಿಸಲು ಹೆಣಗಾಡಿದ. ಇನ್ನು ಕೆಲವೇ ಕೆಲವು ನಿಮಿಷಗಳಲ್ಲಿ ಸಾಯಲಿದ್ದ ಸಾಕ್ರಟಿಸ್, ಕೊನೆಗೆ ಸಾವನ್ನೂ ಕುರಿತು ತನ್ನ ಜನರಿಗೆ ತಿಳುವಳಿಕೆ ನೀಡಲು ಯತ್ನಿಸಿದ. 
   ಈತ ಯುವಕನಾಗಿದ್ದಾಗ, ಯಾವುದನ್ನು ನಾವು ನಿಸರ್ಗದ ಪರಿಶೋಧ ಎಂದು ಕರೆಯುತ್ತೇವೆಯೋ ಆ ಕುರಿತು ಅತ್ಯಂತ ಕುತೂಹಲಭರಿತನಾಗಿದ್ದ. ಪ್ರಪಂಚದ ಎಲ್ಲ ವಸ್ತುಗಳ ಹಿಂದಿರುವ ಕಾರಣಗಳನ್ನು ತಿಳಿದುಕೊಳ್ಳುವುದು ಮಹತ್ವದ ಸಾಧನೆಯೆಂದು ಆತನ ನಂಬಿಕೆಯಾಗಿತ್ತು. ಈ ಜೀವ ಜಗತ್ತಿನಲ್ಲಿ ಯಾಕೆ ಪ್ರತಿಯೊಂದು ವಸ್ತು ಅಸ್ತಿತ್ವವನ್ನು ಪಡೆದುಕೊಳ್ಳುತ್ತದೆ? ಯಾಕೆ ನಶಿಸುತ್ತದೆ? ಮತ್ತೇ ಯಾಕೆ ಬಾಳುತ್ತದೆ? ಎನ್ನುವ ಪ್ರಶ್ನೆಗಳು ಆತನನ್ನು ಬಳಲಿಸಿದ್ದವು.
  ಸಾಕ್ರೆಟಿಸ್‍ನನ್ನು ಸಂತೃಪ್ತಪಡಿಸಬಲ್ಲ ಗುರುವೊಬ್ಬ ಸಿಗಲಾರದಕ್ಕಾಗಿ ಆತ ತನ್ನದೇ ಆದ ರೀತಿಗಳನ್ನು ಹುಡುಕುವಲ್ಲಿ ತಲ್ಲೀನನಾಗಿದ್ದ. ಹಾಗಂತ ಆತನಿಗೆ ಯಾರದೋ ಗುರುವಾಗಬೇಕೆನ್ನುವ ಹಂಬಲವೂ ಇರಲಿಲ್ಲ. ಕೇಳಲು ಸಿದ್ಧನಿರುವ ಯಾರೊಂದಿಗೂ ಆತ ಸಂವಾದಿಸಲು ಸಿದ್ಧನಿದ್ದ. ತನ್ನಷ್ಟಕ್ಕೆ ತಾನು ಜಾಣ ಎಂದು ಎಂದೂ ಪರಿಗಣಿಸದ ಸಾಕ್ರಟಿಸ್ ತನಗಿಂತಲೂ ಜಾಣರು ಯಾರಾದರೂ ಇದ್ದಾರೆಯೆ? ಎಂದು ತಿಳಿದುಕೊಳ್ಳುವಲ್ಲಿ ಕುತೂಹಲಬರಿತನಾಗಿದ್ದ. ಹೀಗಾಗಿ ಯಾರು ಜಾಣರೆಂದು ಘೋಷಿಸಿಕೊಂಡಿದ್ದರೋ ಅಂಥವರ  ಮುಂದೆ ಸಾಕ್ರಟಿಸ್ ಪ್ರಶ್ನೆಯಿಡುತ್ತಲೇ ಹೋದ. ದೇವವಾಣಿಯಿಂದ ಧಿಕ್ಕರಿಸಲ್ಪಟ್ಟ ಆತನ ಈ ಶೋಧ ನಿಲ್ಲಲಿಲ್ಲ. ಜ್ಞಾನಿಗಳು ಯಾರೂ ಸಿಗದ ಕಾರಣ ತನ್ನ ಶೋಧವನ್ನು ಮುಂದುವರಿಸಿದ ಸಾಕ್ರೆಟಿಸ್, ಅದನ್ನು ಪ್ರಪಂಚದಲ್ಲಿ ಅತ್ಯಂತ ಪವಿತ್ರಕಾರ್ಯ ಎಂದು ಪರಿಗಣಿಸಿದ. ಹೀಗಾಗಿ ಜ್ಞಾನದ ಅನ್ವೇಷಣೆಗೆ ಸಾಕ್ರೆಟಿಸ್ ಕೊರಳೊಡ್ಡಿದ.
      ವಿಷ ಸೇವಿಸುವ ಮುಂಚೆ ಆತ ಹೇಳುತ್ತಾನೆ- "ಬಂಧುಗಳೇ, ನೀವೀಗ ಚರಿತ್ರೆಯನ್ನು ದುಷ್ಪ್ರೇರಿತ ಜನಗಳ ಕೈಯಲ್ಲಿ ಕೊಡುತ್ತಿದ್ದೀರಿ. ನಾನು ಜಾಣನಲ್ಲನೆಂದು ನಾನೇ ಘೋಷಿಸಿಕೊಂಡಾಗಿಯೂ 'ಜಾಣತನದ ದುರಹಂಕಾರದಲ್ಲಿ ಮೆರೆಯುತ್ತಿದ್ದಾನೆ ಸಾಕ್ರೆಟಿಸ್' ಎಂದು ಸುಳ್ಳಾಡಿದವರ ಕೈಗೆ ನೀಡುತ್ತಿದ್ದೀರಿ. ಈಗ ಯಾವುದನ್ನೂ ತಡೆಯದಷ್ಟು ಪರಿಸ್ಥಿತಿ ಮುಂದುವರೆದಿದೆ. ಆದರೆ ನಮ್ಮ ಮುಂದುವರಿಕೆ ಬದುಕಿನೆಡೆಗೆ ಅಲ್ಲ, ಸಾವಿನೆಡೆಗೆ. ನೋಡಿ ಜೀವನದಲ್ಲಿ ಎಷ್ಟೊಂದು ಮುಂದೆ ಬಂದು ಬಿಟ್ಟಿದ್ದೇವೆ. ಅದೂ ಬದುಕಿನೆಡೆಗೆ ಅಲ್ಲ ಸಾವಿನೆಡೆಗೆ.
     ನನ್ನ ಭಾಂದವರೇ, ವಾದಕ್ಕೆ ನನ್ನನ್ನೇ ನಾನು ಅರ್ಪಿಸಿಕೊಂಡಿದ್ದೇನೆ. ಅದೇ ನನಗೆ ಈ ಜೀವನದ ಶಿಕ್ಷೆಯಿಂದ ಮುಕ್ತಿಯೆನಿಸಿದ್ದು. ಅದು ಉದ್ಧಟತನವೆಂದು ನಾನೆಂದೂ ಅಂದುಕೊಂಡಿಲ್ಲ. ಆದರೆ ಸತ್ಯದ ನನ್ನ ಮಾತುಗಳು ನಿಮ್ಮ ಕಿವಿಗಳಿಗೆ, ಮನಸ್ಸಿಗೆ ಮುದನೀಡುವುದು ಸಾಧ್ಯವಿಲ್ಲ.
ನಾನು ಬದುಕುವುದಕ್ಕಿಂತಲೂ ಈ ಸಾವನ್ನು ಪ್ರೀತಿಸಿದ್ದೇನೆ. ಸತ್ವ ಪರೀಕ್ಷೆಯಲ್ಲಾಗಲೀ, ಯುದ್ಧದಲ್ಲಾಗಲಿ: ನಾನಾಗಲಿ, ಇನ್ನಾವುದೇ ಯೋಧನಾಗಲಿ ಸಾವನ್ನು ಧಿಕ್ಕರಿಸುವ, ಅದರಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಮಾಡಬಹುದೆ? ಯುದ್ಧ ಭೂಮಿಯಲ್ಲಿ ರಕ್ಷಿಸಿಕೊಳ್ಳಬೇಕೆನ್ನುವವ ಆಯುಧಗಳನ್ನು ಬದಿಗಿಟ್ಟು ತನ್ನ ಜೀವದ ಬೆನ್ನಟ್ಟಿದವನಿಗೆ ಮೊರೆಹೋಗಬೇಕಷ್ಟೆ. ಗಂಡಾಂತರಗಳಲ್ಲಿ ಅನೇಕ ಬಗೆಗಳಿವೆ. ಸತ್ಯವನ್ನು ಹೇಳಬೇಕೆನ್ನುವವ ಅದರ ಒಂದಿಲ್ಲ ಒಂದು ಪ್ರಕಾರವನ್ನು ಎದುರಿಸಲೇಬೇಕು.
      ಸಾವಿನಿಂದ ಪಾರಾಗುವುದು ಕಷ್ಟದ ಕೆಲಸವೇನಲ್ಲ ಗೆಳೆಯರೆ. ಆದರೆ ಎದೆಗುಂದುವಿಕೆಯಿಂದ ಪಾರಾಗುವುದು ಅತ್ಯಂತ ಕಷ್ಟಕರ.  ಹಿಂಜರಿಕೆ ಸಾವಿಗಿಂತ ವೇಗವಾಗಿ ಆವರಿಸಿಕೊಳ್ಳುತ್ತದೆ. ನಾನು ನಿಮ್ಮಿಂದ ಮರಣದಂಡನೆಗೆ ಒಳಗಾಗಿರುವುದರಿಂದ ಸತ್ಯದಿಂದ ದೂರವಾಗುತ್ತಿದ್ದೇನೆ ಮತ್ತು ಅನ್ಯಾಯದ ಬಾಹುಗಳಲ್ಲಿದ್ದೇನೆ. ಯಾರು ನನ್ನ ಈ ಶಿಕ್ಷೆಗೆ ಕಾರಣರಾದರೋ ಅವರಿಗೆ ಭವಿಷ್ಯ ಏನಾಗಬಹುದು ಎಂದು ಹೇಳಲಿಚ್ಚಿಸುತ್ತೇನೆ. ನನ್ನ ಸಾವಿನ ಮರುಕ್ಷಣವೇ ಇಂತಹದೇ ಪರಿಸ್ಥಿತಿ ನಿಮ್ಮದೂ ಆಗಲಿದೆ. ಹಾಗೇ ನೋಡಿದರೆ ಇದಕ್ಕಿಂತಲೂ ಗಂಭೀರವಾಗಲೂಬಹುದು.
     ನನ್ನ ಮೇಲೆ ಹೊರಿಸಿದ ಆಪಾದನೆಯೆಲ್ಲವೂ ನಿಮ್ಮ ಮೇಲಿನವೂ. ನೀವು ಇಂದು ಈ ಕ್ರಿಯೆಯನ್ನು ಮಾಡುತ್ತಿದ್ದೀರಿ, ಯಾಕೆಂದರೆ ಇಂದು ನೀವು ವಿವರಣೆಗಳನ್ನು ಕೊಡಬೇಕಿಲ್ಲ. ಆದರೆ ಮುಂದೊಂದು ದಿನ ನೀವು ಇದರಿಂದ ಓಡಿಹೋಗುವಂತಿಲ್ಲ. ನಿಮ್ಮನ್ನು ಆಪಾದಿಸುವರ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ಅವರಿನ್ನೂ ಭಯಾನಕರಾಗುತ್ತಾರೆ. ನನ್ನನ್ನು ಸಾವಿಗೆ ದೂಡುವುದರ ಮೂಲಕ ಇವರನ್ನು ನೀವು ತಡೆದು ನಿಲ್ಲಿಸಬಹುದು ಅಂದುಕೊಂಡಿದ್ದರೆ ಅದೂ ನಿಮ್ಮ ತಪ್ಪು ಕಲ್ಪನೆ. ಈ ತರಹದ ಪಲಾಯನ ಅಸಾಧ್ಯವಾಗಿದೆ, ಅಗೌರವದಿಂದ ತುಂಬಿಕೊಂಡಿದೆ. ಹೀಗಾಗಿ ಈ ಸಾವು ಅದೆಷ್ಟೋ ಗೌರವಾನ್ವಿತವಾಗಿದೆ. ನಿಮ್ಮ ಕರ್ತವ್ಯ ಇನ್ನೊಬ್ಬರ ಮೇಲೆ ನಿಗಾಯಿಡುವುದಲ್ಲ, ಬದಲಾಗಿ ನಿಮ್ಮೊಳಗೇ ನೀವು ಇಳಿಯುವುದು. ಈ ಭವಿಷ್ಯವಾಣಿಯನ್ನು ನಿಮ್ಮ ಮುಂದೆ ಇಡುವುದರ ಮೂಲಕ ವಿದಾಯವನ್ನು ಬಯಸುತ್ತೇನೆ.


 ಸಾಕ್ರೆಟಸ್ ಚರ್ಚಿಸಿರುವಂತೆ ಮನುಷ್ಯನ ಸಾವಿನಲ್ಲಿ ಎರಡು ಸಾಧ್ಯತೆಗಳಿವೆ. ಒಂದು ಸತ್ತ ವ್ಯಕ್ತಿ ಈ ಪ್ರಪಂಚದ ಲೆಕ್ಕಾಚಾರದಿಂದ ಹೊರತಾಗುತ್ತಾನೆ, ಪ್ರತ್ಯೇಕಿಸಲ್ಪಡುತ್ತಾನೆ ಅಥವಾ ಆತ್ಮಕ್ಕೊಂದು ದಾರಿ ತೆರೆದುಕೊಳ್ಳುತ್ತಾನೆ. ಅದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ, ದೇಹದಿಂದ  ಮತ್ತೊಂದು ದೇಹಕ್ಕೆ, ಆತ್ಮಕ್ಕೆ ದಾರಿಯಾಗುತ್ತದೆ. ಆತನ ಪ್ರಕಾರ "ಎಲ್ಲ ಅನುಭೂತಿಗಳಿಂದ ಸಾವು ಒಂದು ಪ್ರತ್ಯೇಕತೆಯ ಮಾರ್ಗ ಎನ್ನುವದಾದರೆ ಅದೊಂದು ನಿದ್ರೆ. ಅಲ್ಲಿ ನಿದ್ರಿಸುವವನಿಗೆ ಕನಸುಗಳಿಲ್ಲ. ಕನಸು ಕಾಣುವವನೊಬ್ಬ ಬೇರೆಯೇ. ಇಲ್ಲಿ ಸಾವು ಒಂದು ಅದ್ಭುತ ಗಳಿಕೆ. ನಾನು ಅಂದುಕೊಳ್ಳುತ್ತೇನೆ, ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಕನಸುಗಳಿಲ್ಲದೇ ಅತ್ಯಂತ ಸುಖವಾಗಿ ಎಷ್ಟು ರಾತ್ರಿಗಳು ನಿದ್ರಿಸಿದ? ಹಾಗೂ ಉಳಿದ ರಾತ್ರಿ ಮತ್ತು ಹಗಲುಗಳಿಗಿಂತಲೂ ಅದೆಷ್ಟು ಉತ್ತಮವಾಗಿತ್ತು ಎನ್ನುವುದನ್ನು ಲೆಕ್ಕಕ್ಕಿಡುವುದಾದರೆ ಆತ ಈ ಗಳಿಕೆಯನ್ನು ಕೂಡ (ಸಾವಿನ) ಲೆಕ್ಕಕ್ಕೆ ತೆಗೆದುಕೊಳ್ಳಲೇಬೇಕು. ಇದು ನಾನು ಸಾಮಾನ್ಯ ಪ್ರಜೆಗಳಿಗಷ್ಟೇ ಸೂಚಿಸುತ್ತಿಲ್ಲ. ಅರಸನಿಗೂ ಕೂಡ. ಸಾವು ಇಂತಹ ಒಂದು ಲೆಕ್ಕಾಚಾರದ ವಸ್ತು. ನಿಜಕ್ಕೂ ಅದೊಂದು ಲಾಭವೇ. ಅದರ ಮುಂದೆ ಭವಿಷ್ಯದ ಯಾವ ದಿನಗಳೂ ನನಗೆ ಅದ್ಭುತವೆನಿಸುತ್ತಿಲ್ಲ. ಆದರೆ ಸಾವನ್ನು ನೀವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪಯಣ ಎನ್ನುವುದಾದರೆ ಎಲ್ಲ ತೀರಿಹೋದವರು ಬದುಕಿದ್ದಾರೆ ಎಂದೇ ಅರ್ಥ. ಹೀಗೆಂದ ಮೇಲೆ ಇದಕ್ಕಿಂತಲೂ ದೊಡ್ಡ ಲಾಭ ಇನ್ನೇನು ಬೇಕು ಹೇಳಿ? ಈ ಸಾವು ಸತ್ತ, ಅಗಣಿತ, ಸಾಯದ ಪ್ರತಿಭೆಗಳ ಲೆಕ್ಕಕ್ಕೆ ನನ್ನನ್ನು ಸೇರಿಸುವುದಾದರೆ ನಾನು ಮತ್ತೆ ಮತ್ತೆ ಸಾಯಲು ಇಚ್ಛಿಸುತ್ತೇನೆ." ಸಾಕ್ರೆಟಿಸ್ ಹೇಳುತ್ತಾನೆ, "ನಮ್ಮ ಅನ್ಯಾಯದ ಲೆಕ್ಕಾಚಾರಕ್ಕೆ ಬಲಿಯಾದ ಅನೇಕ ಚಿಂತಕರ ಜೊತೆ ತಾನಿರಲು ಬಯಸುತ್ತೇನೆ" ಎಂದು. ಆತ ಹೇಳುತ್ತಾನೆ, "ನನ್ನ ಬದುಕಿನ ಅತ್ಯಂತ ಶ್ರೀಮಂತ ಗಳಿಗೆ ಯಾವುದಾಗಿತ್ತು ಎಂದು ನೀವು ಪ್ರಶ್ನಿಸುವುದಾದರೆ ನಿಮ್ಮೊಂದಿಗೆ ವಾದಿಸುವ ಘಳಿಗೆಯೇ ಆಗಿತ್ತು"’ಎಂದು. 
ಜನರನ್ನು ಪ್ರಶ್ನಿಸುವುದು, ಪರೀಕ್ಷಿಸುವುದು, ಅತ್ಯಂತ ಜಾಣನಾದವನನ್ನು ಹುಡುಕುವುದು ಎಲ್ಲವೂ ತನಗೆ ಪ್ರಿಯವಾದವುಗಳೇ. ಆದರೆ ಯಾವ ಬೆಲೆಯನ್ನು ತೆತ್ತು? ಅದೇನೆಯಾಗಿರಲಿ, ಅದೊಂದು ಖುಷಿಯ ಕೆಲಸ ಸಾಕ್ರೆಟಿಸನಿಗೆ. ಹೀಗಾಗಿ ಸಾವೂ ಶಿಕ್ಷೆ ಎನ್ನಿಸಲಿಲ್ಲ ಆತನಿಗೆ. ಆತನ ಪ್ರಕಾರ ತನ್ನ ಸುತ್ತಲೂ ಸಾವಿನ ಮೋಜನ್ನು ನೋಡಲು ಸೇರಿದವರಿಗಿಂತಲೂ ಸಾವಿನಲ್ಲಿ ಬದುಕುತ್ತಿರುವವರು ಹೆಚ್ಚು ನಿಶ್ಚಿಂತರಾಗಿದ್ದಾರೆ, ಸುಖವಾಗಿದ್ದಾರೆ ಮತ್ತು ಅಮೃತ ಪುತ್ರರಾಗಿದ್ದಾರೆ. ಆ ಕಾರಣಕ್ಕಾಗಿ ಅವರು ಶಾಶ್ವತವೂ ಮತ್ತು ಸತ್ಯವೂ ಆಗಿದ್ದಾರೆ.
ಆದ್ದರಿಂದ ಸಾವಿನ ಕೆಲವು ಕ್ಷಣಗಳ ಮುನ್ನ ತನ್ನ ಜನರನ್ನು, "ಓ ನನ್ನ ನ್ಯಾಯಾಧೀಶರೆ, ನೀವೆಲ್ಲರೂ ಸಾವಿನೊಂದಿಗಿನ ಆ ನಿರೀಕ್ಷೆಗಳನ್ನು ಆನಂದಿಸಬೇಕು. ಒಬ್ಬ ಒಳ್ಳೆಯ ಮನುಷ್ಯನಿಗೆ ಕೆಟ್ಟದ್ದೆನ್ನುವುದು ಯಾವುದೂ ಇಲ್ಲ. ಅದು ಆತನ ಬದುಕಿನ ಜೀವಿತಾವಧಿಯಲ್ಲಿರಬಹುದು ಅಥವಾ ಆತನ ಸಾವಿನ ನಂತರದಾಗಿರಬಹುದು. ದೇವರೊಂದಿಗಿನ ಆತನ ಕಾಳಜಿಗಳನ್ನು ನೀವು ಪ್ರಶ್ನಿಸಲಾಗದು. ನನಗೆ ಗೊತ್ತಿದೆ. ಇಂದು ನನ್ನೊಂದಿಗೆ ನಡೆದಿರುವುದೆಲ್ಲವೂ ಆಕಸ್ಮಿಕವಲ್ಲ. ಎಲ್ಲವೂ ನನಗೆ ಸ್ಪಷ್ಟವಾಗಿದೆ. ಈ ಸಾವು ನನ್ನನ್ನು ಕಾಳಜಿಗಳಿಂದ ಮುಕ್ತಗೊಳಿಸುತ್ತದೆ ಅಷ್ಟೇ. ನಿಮ್ಮ ಯಾವ ಆಪಾದನೆಗಳು ನನ್ನೆಡೆಗೆ ಗುರಿಮಾಡಿದವು ಅಲ್ಲ. ನನ್ನನ್ನು ಆಪಾದಿಸಿದವರ ವಿರುದ್ಧ ನಾನು ಯಾವುದೇ ತಿರಸ್ಕಾರ ಭಾವ ತಾಳಿಲ್ಲ. ನನ್ನನ್ನು ಭಗ್ನಗೊಳಿಸುವುದಕ್ಕೋಸ್ಕರ ಅವರು ಎಷ್ಟೇ ಉದ್ದೇಶಪೂರಿತವಾಗಿ ವರ್ತಿಸಿದ್ದರೂ ಅವರು ನನ್ನನ್ನು ನಾಶಪಡಿಸಲಾಗಿಲ"್ಲ’ಎಂದು ಸ್ಪಷ್ಟಿಕರಿಸುತ್ತಾನೆ.

ಗುಡಿಸಲಲ್ಲಿ, ದೇವಾಲಯದಲ್ಲಿ ದೀಪ ಹಚ್ಚಿಟ್ಟಂತೆ ಮಾತನಾಡಿದ ಸಾಕ್ರೆಟಿಸನಿಗೆ, ಮಾತು ವ್ಯಸನವಾಗಿರಲಿಲ್ಲ. ಹೀಗಾಗಿ ಸಾವೂ ಆತನನ್ನು ಸಾಯಿಸಲಾಗಲಿಲ್ಲ. ಬದಲಾಗಿ ಸಾಕ್ರೆಟಿಸನಿಂದ ಚರ್ಚಿಸಲ್ಪಟ್ಟ ಸಾವೂ ಕೂಡ ಹೊಸ ಅರ್ಥ ಸಾಧ್ಯತೆಯೊಂದಿಗೆ ಮರು ಹುಟ್ಟು ಪಡೆದಿದೆ. ಆತನ ಸಾವು ಚರಿತ್ರೆಯ ಪುಟವಾಗಿದೆ.

Saturday 14 June 2014

ವರ್ತಮಾನದ ಬಿಕ್ಕಟ್ಟುಗಳು

ದಿನಾಂಕ: 14/06/2014    ಸ್ಥಳ: ಶ್ರೀರಂಗ ಸಭಾಂಗಣ, ರಂಗಾಯಣ

ಹಸಿವೆಗೆ ನಾನು ಮೈ ಮಾರಿಕೊಂಡೆ
ಆದರೆ ನಿನಗೆ ಆತ್ಮ ಮಾರಿಕೊಳ್ಳುವಂಥದ್ದೇನಾಗಿತ್ತು?

ಬಿಕ್ಕಟ್ಟು 1: ನೋಬೆಲ್ ಪ್ರಶಸ್ತಿಯನ್ನು ಪಡೆಯುತ್ತ ಕೆಲವು ಮಹತ್ವದ ಮಾತುಗಳನ್ನಾಡಿದ ವಿಲಿಯಂ ಫಾಕ್‍ನರ್ ಅಕ್ಷರ ಲೋಕದ ನಮ್ಮಗಳಿಗೆ ಮಹತ್ವದ ಪ್ರಶ್ನೆಯೊಂದನ್ನು ಕೇಳುತ್ತ ಸೃಜನಲೋಕದ ಬಿಕ್ಕಟ್ಟಿಗೆ ಸಮಾಧಾನ ನೀಡಿದ್ದಾನೆ. ಬರಹಗಾರರು ಬಳಲುತ್ತಿರುವ ಉಭಯ ಭ್ರಷ್ಟತೆಯ ಬಿಕ್ಕಟ್ಟಿಗೆ ದಾರಿ ತೋರಿಸಿದ್ದಾರೆ. .
    ಇಂದು ನಮ್ಮೆಲ್ಲರ ದುರಂತವೂ ಸಾಮಾನ್ಯವಾದದು ಹಾಗೂ ಸಾರ್ವತ್ರಿಕವಾದದು. ಶಾರೀರಕವೂ, ಸಾರ್ವತ್ರಿಕವೂ ಆದ ಈ ದುರಂತವನ್ನು ನಾವು ಸಹಿಸಿಕೊಳ್ಳುತ್ತಾ ಬಂದಿದ್ದೇವೆ, ಮುಂದೆಯೂ ಸಹಿಸಿಕೊಳ್ಳಬಹುದೇನೊ. ಆತ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳೇ ಇಲ್ಲವೇನೊ ಎನ್ನುವಷ್ಟು ಭೌತಿಕ ಜಗತ್ತಿನಲ್ಲಿ ನಾವು ಮುಳುಗಿ ಹೋಗಿದ್ದೇವೆ. ಈಗ ನಿತ್ಯವೂ ನಮ್ಮ ಮುಂದಿನ ಸಮಸ್ಯೆಯೊಂದೆ - ನಾವು ಯಾವ ಕ್ಷಣದಲ್ಲಿ ಸ್ಪೋಟಗೊಳ್ಳುತ್ತೇವೆ? ಈ ಸಮಸ್ಯೆಯನ್ನು ಮುಂದಿರಿಸಿಕೊಂಡು ಈ ಬಾಹ್ಯ ಒತ್ತಡದ ಅಡಿಯಲ್ಲಿ ಸಾಹಿತ್ಯವನ್ನು ರಚಿಸುತ್ತಿರುವ ಬಹುಪಾಲು ಯುವ ಬರಹಗಾರರು ಮನುಷ್ಯ ಹೃದಯದೊಳಗಿನ ಆಂತರಿಕ ತುಮುಲವನ್ನು ಮರೆತೇ ಬಿಟ್ಟಿದ್ದಾರೆ. ಆದರೆ ಚಿರಕಾಲವೂ ಉಳಿಯಬಹುದಾದ, ಬಾಳಬಹುದಾದ, ದಾಖಲೆಗೆ ಅರ್ಹವಾದ ಸಾಹಿತ್ಯ ಆಂತರಿಕ ತುಮುಲದಿಂದ ಮಾತ್ರ ಹುಟ್ಟುತ್ತದೆ. ವರ್ತಮಾನದ ಬರಹಗಾರ ಇದನ್ನು ಚೆನ್ನಾಗಿ ತಿಳಿಯಬೇಕಾಗಿದೆ. ಭಯದಲ್ಲಿರುವುದೇ ಎಲ್ಲ ಬರಹಗಳ ಬುನಾದಿ. ಲೇಖಕನಾಗುವವನು ಇದನ್ನು ಅರಿಯಬೇಕಾದದು ಅವಶ್ಯ. ಹೃದಯ ಸಂಬಂಧಿ ಪುರಾತನ ಮೌಲ್ಯಗಳಾದ ಪ್ರೀತಿ, ಗೌರವ, ದುಃಖ, ದುರಹಂಕಾರ, ಸಹಾನುಭೂತಿ ಹಾಗೂ ತ್ಯಾಗಗಳಂಥ ಅಂಶಗಳಿಲ್ಲದ ಯಾವ ಸಾಹಿತ್ಯವೂ ತಾತ್ಕಾಲಿಕವಾಗಿರುತ್ತದೆ ಹಾಗೂ ಹುಟ್ಟುತ್ತಲೇ ಅವಸಾನದ ಹಂತದಲ್ಲಿರುತ್ತದೆ. ಇವುಗಳನ್ನು ಚರ್ಚಿಸದ ಲೇಖಕ ಶಾಪಗ್ರಸ್ಥನಂತೆ. ಇವುಗಳ ಹೊರತಾಗಿ ಸಾಹಿತ್ಯವನ್ನು ರಚಿಸಲು ಹೊರಟ ಸಾಹಿತಿ ದೇಹವನ್ನು ಕುರಿತು ಮಾತ್ರ ಬರೆಯುತ್ತಾನೆ. ಅಂತಯೇ ಅಂತಿಮವಾಗಿ ಬದುಕಿನಲ್ಲಿ ಸಹಾನುಭೂತಿ ಹಾಗೂ ಸುಜೀವನದ ಆಶಾಕಿರಣವನ್ನು ಕಾಣದೇ ಹೊರಗುಳಿಯುತ್ತಾನೆ. ಇಂತಹ ಸಾಹಿತಿ ಪ್ರಪಂಚದ ಎಲ್ಲ ಜನರನ್ನು ಭಾದಿಸಿದ ಯಾವ ನೋವನ್ನು ಕುರಿತು ಬರೆಯಲಾರ, ಅಂತೆಯೇ ಯಾವ ನೆನಪನ್ನು ಉಳಿಸಿ ಹೋಗಲಾರ. ಇವನ ಬರಹದಲ್ಲಿ ಹೃದಯ ಕುರಿತಾದ ಸಾಲುಗಳಿರುವುದಿಲ್ಲ. ಬರೀ ಗ್ರಂಥಗಳ ಕುರಿತು ಚರ್ಚೆಯಿರುತ್ತದೆ.

ಬಿಕ್ಕಟ್ಟು 2: ನಾಲ್ಕು ನೂರು ವರ್ಷಗಳ ಗುಲಾಮಿ ಇತಿಹಾಸ ಈ ದೇಶದಲ್ಲಿ ಏನೆಲ್ಲ ಆಗಿದ್ದರೂ ಅನ್ನ, ಶಿಕ್ಷಣ ಮತ್ತು ಧರ್ಮದ ಮಾರಾಟವಾಗಿರಲಿಲ್ಲ. ಆದರೆ ಕೊಳ್ಳುಬಾಕ ಸಂಸ್ಕøತಿಯ ಈ ದಿನಗಳಲ್ಲಿ ಈಗ ಇದೆಲ್ಲವೂ ಜರುಗಿದೆ. ನಯವಂಚಕರನ್ನು, ಜೊಳ್ಳುಗಳನ್ನು ಸೃಷ್ಠಿಸುತ್ತಿರುವ ನಮ್ಮ ಶಿಕ್ಷಣ ನಮ್ಮ ಯುವಕರನ್ನು ಎತ್ತ ನಡೆಯಿಸಿಕೊಂಡು ಹೊರಟಿದೆ ಎನ್ನುವುದನ್ನು ಜೆ.ಕೃಷ್ನಮೂರ್ತಿ ಈ ತೆರನಾಗಿ ವಿವರಿಸುತ್ತಾರೆ.
      ಆಧುನಿಕ ಶಿಕ್ಷಣ ನಮ್ಮನ್ನು ವಿಚಾರಹೀನರನ್ನಾಗಿಸುತ್ತಿದೆ. ನಾವು ನಾವಾಗುವುದರ ಬಗೆಗೆ ಅಲ್ಲಿ ದಾರಿಗಳಿಲ್ಲ. ಕೆಲವು ಪರೀಕ್ಷೆಗಳನ್ನು ಪಾಸಾಗುತ್ತೇವೆ. ದೈವಲೀಲೆಯಿಂದಾಗಿ ಒಂದು ನೌಕರಿ ಸಿಗುತ್ತದೆ. ಅದು ನಮ್ಮ ನಿತ್ಯದ ಯಥಾವತ್ತಾದ ಜೀವನವಾಗುತ್ತದೆ. ನಾನು ನೌಕರಿಯನ್ನು ಇಷ್ಟಪಡದೇ ಇರುತ್ತಿರಬಹುದು, ಆದರೆ ಹೊಟ್ಟೆಪಾಡಿಗೆ ಬೇರೆ ದಾರಿ ಕಾಣದೆ ಅದನ್ನೇ ಮುಂದುವರೆಸಿಕೊಂಡು ಹೋಗುವ ಒತ್ತಡಕ್ಕೆ ಸಿಲುಕುತ್ತೇನೆ. ನನಗೇನೋ ಸಂಪೂರ್ಣ ಹೊಸದಾಗಿರುವದನ್ನು ಮಾಡಬೇಕೆಂಬ ಹಂಬಲವಿರಬಹುದು.  ಆದರೆ ಜವಾಬ್ದಾರಿ ಮತ್ತು ಬದ್ಧತೆಗಳು ಅದರಿಂದ ಮುಕ್ತಗೊಳಿಸುತ್ತಿಲ್ಲ. ಹೋಗುತ್ತೇನೆ ನಿರಾಶಗೊಂಡ ನಾನು ಕಾಮದಲ್ಲಿ, ಕುಡಿತದಲ್ಲಿ, ರಾಜಕೀಯದಲ್ಲಿ, ಆಡಂಬರದ ಧರ್ಮಾಚರಣೆಯಲ್ಲಿ ಪಲಾಯನಗೈಯುತ್ತೇನೆ.

ಬಿಕ್ಕಟ್ಟು 3: ಮೇಲ್ನೊಟಕ್ಕೆ ಪ್ರಜಾಪ್ರಭುತ್ವದಂತೆ ತೋರಿಸಿಕೊಳ್ಳುವ, ಆದರೆ ಇನ್ನೊಂದು ರೀತಿಯಲ್ಲಿ ಇಡೀ ರಾಷ್ಟ್ರವನ್ನು ಒಂದು ಕೋಮಿನ, ಒಂದು ಆಲೋಚನಾ ಕ್ರಮದ, ಅಧಿಕಾರ ಶಾಹಿಯ ಈ ದೇಶದಲ್ಲಿ ಪ್ರಜಾಪ್ರಭುತ್ವವೂ ಆತಂಕದಲ್ಲಿದೆ. ಯಾವು ಅತಿಕ್ರಮಣದ ರಾಜಕೀಯ ವಿಚಾರಧಾರೆ ಅಲ್ಲ ಎಂದು ಇ ರಾಷ್ಟ್ರ ಒಪ್ಪಿಕೊಂಡಿತೊ ಅದು ಈಗ ಎಲ್ಲ ಮೇರೆಗಳನ್ನು ಮೀರಿದೆ, ಚುನಾವಣೆ ಎನ್ನುವುದು ಒಂದು ವ್ಯಂಗ್ಯವಾಗಿದೆ. ಈ ಕುರಿತು ಹೆರಾಲ್ಡ ಮ್ಯಾಕ್‍ಮಿಲನ್ ಹೇಳುತ್ತಾನೆ-
      ಎಲ್ಲ ರಾಷ್ಟ್ರಗಳು ಒಂದು ಇನ್ನೊಂದನ್ನು ಆಧರಿಸಿವೆ ಮತ್ತು ಇದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನಾವೆಲ್ಲರೂ ಮನಗಂಡ ಮಾತಾಗಿದೆ. ಯಾರು ಇಂದು ಪ್ರಜಾಸತ್ತಾತ್ಮಕವಾಗಿ ಅಥವಾ ಪ್ರಜಾಸತ್ತ್ಯೆಯ ದಯೆಯಿಂದ ಅಧಿಕಾರದಲ್ಲಿರುವರೋ ಅವರು ತಾತ್ಕಾಲಿಕವಾಗಿ ನಮ್ಮನ್ನು ಆಳುತ್ತಿರುತ್ತಾರೆ. ಅದು ನಿಮ್ಮ ದೇಶದಲ್ಲಿ ಇರಬಹುದು ಅಥವಾ ನಮ್ಮ ದೇಶದಲ್ಲಿ ಇರಬಹುದು. ಆದರೆ ಇತಿಹಾಸದ ಯಾವುದೇ ಪ್ರಮುಖ ಹಂತದಲ್ಲಿ ತಾತ್ಕಾಲಿಕವಾಗಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಒಂದೇ ಒಂದು ಕಾರಣಕ್ಕಾಗಿ ಯಾರು ಯಾರನ್ನೂ ಅತಿಕ್ರಮಿಸುವಂತಿಲ್ಲ, ನಾವು ಇಷ್ಟಪಟ್ಟಿರುವುದೆಂದ ಮಾತ್ರಕ್ಕೆ ನಮ್ಮಿಚ್ಛೆಯಂತೆ ನಾವು ಏನನ್ನೂ ಚಲಾಯಿಸುವಂತಿಲ್ಲ. ಈ ಪ್ರಪಂಚ ಬದುಕಿದವರ ಪಾಲಿಗೆ ಎಷ್ಟು ಅವಶ್ಯ ಮತ್ತು ಅನಿವಾರ್ಯವೋ ಅಷ್ಟೇ ಪ್ರಮಾಣದಲ್ಲಿ ಸತ್ತವರಿಗಾಗಿ ಮತ್ತು ಹುಟ್ಟಿ ಬರುವವರಿಗೂ ಕೂಡಾ.

ಬಿಕ್ಕಟ್ಟು 4: ಜಾಗತೀಕರಣ ಆರ್ಥಿಕತೆಯ ಒಂದು ವಿಚಿತ್ರ ಮನೋರೋಗಕ್ಕೆ ಹುಟ್ಟುಹಾಕಿತು, ಹಣಗಳಿಸುವುದು ಬದುಕಿನ ಅತಿ ಮುಖ್ಯ ಗುರಿಯಾಯಿತು. ಕಾರ್ಪೊರೇಟ್ ವ್ಯವಸ್ಥೆಗಳು ಯುವಕರನ್ನು ಆತ್ಮವಂಚನೆಯ ದಾರಿಗೆಳೆದು ಅವರಲ್ಲೊಂದು ಭಯವನ್ನು ಸೃಷ್ಠಿ ಮಾಡಿತು. ಅದನ್ನು ಪ್ರಗತಿ, ಸಾಧನೆ ಮತ್ತು ಸಮೃದ್ಧಿ ಎಂದು ಬಿಂಬಿಸಿತು. ಆದರೆ ಪಶ್ಚಿಮ ಪ್ರಣೀತ ಈ ಆಲೋಚನೆ ಎಷ್ಟರಮಟ್ಟಿಗೆ ಈ ದೇಶಕ್ಕೆ ಸೂಕ್ತ ಎನ್ನುವುದನ್ನು ಆಲೋಚಿಸುತ್ತ ಬಹಳ ಹಿಂದೆಯೇ ರವೀಂದ್ರನಾಥ ಟ್ಯಾಗೋರ ಒಂದು ಮಹತ್ವದ ವಿಚಾರ ಹೇಳಿದ್ದಾರೆ.
    ನಾವು ಕಳೆದ ಒಂದು ಶತಮಾನದಿಂದ ಪಶ್ಚಿಮದ ‘ಸಮೃದ್ಧಿ’ ಎಂಬ ರಥದ ಸೆಳೆತಕ್ಕೊಳಗಾಗಿದ್ದೇವೆ. ಅದರ ಧೂಳಿಗೆ ಬೆರಗಾಗಿದ್ದೇವೆ. ಅದರ ಶಬ್ಧಕ್ಕೆ ಮರುಳಾಗಿದ್ದೇವೆ. ನಮ್ಮ ವಿವಶತೆಗೆ ಪಾಮರರಾಗಿದ್ದೇವೆ. ಅದರ ರಭಸದಿಂದ ಪುಳಕಿತರಾಗಿದ್ದೇವೆ. ಈ ರಥದೊಳಗಿನ ಪಯಣವನ್ನು ನಾವು ಪ್ರಗತಿ ಎಂದು ಗುರ್ತಿಸಿದ್ದೇವೆ. ಈ ಪ್ರಗತಿಯನ್ನು ‘ನಾಗರಿಕತೆ’ (ಅiviಟizಚಿಣioಟಿ) ಎಂದಿದ್ದೇವೆ. ಈಗೊಂದು ವೇಳೆ ಪ್ರಗತಿ ಎಂದರೇನು? ಯಾರ ಪ್ರಗತಿ? ಎಂದು ಪ್ರಶ್ನಿಸಿಕೊಂಡರೆ ಈ ನಮ್ಮ ಪ್ರಗತಿಯ ಬುಡವೇ ಅಲ್ಲಾಡಿ ಬಿಡುತ್ತದೆ. ಬಹಳ ತಡವಾಗಿ ನಮಗೊಂದು ತಿಳುವಳಿಕೆ ಬಂದಿದೆ, ಅದರ ಪ್ರಕಾರ ನಮಗೆ ಪ್ರಗತಿ ಎಂದರೆ ರಥದ ವೈಜ್ಞಾನಿಕ ಪರಿಪೂರ್ಣತೆ ಅಷ್ಟೇ ಅಲ್ಲ ಬದಲಾಗಿ ಅದು ಸಾಗುವ ದಾರಿಯಲ್ಲಿಯ ತಗ್ಗು ದಿಣ್ಣೆಗಳನ್ನು ಗಮನಿಸುವುದಾಗಿದೆ. ಪ್ರಗತಿ ಬರೀ ರಥಕ್ಕಲ್ಲ, ದಾರಿಗೂ ಅನ್ವಯಿಸುತ್ತದೆ.


     ಗುರುಕುಲಗಳಾಗಿದ್ದ, ಮಠಗಳಾಗಿದ್ದ ದಿಕ್ಕೆಟ್ಟವರ ಪಾಲಿನ ದ್ವಂದಿಗಳಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಈಗ ಮಹಾ ಮೌನಕ್ಕೆ ಶರಣಾಗಿವೆ. ತ್ಯಾಗದ ಕೇಂದ್ರಗಳೆಲ್ಲ ಭೋಗ ವಿಲಾಸದ ಕೇಂದ್ರಗಳಾಗಿವೆ. ಸರ್ವಧರ್ಮ ಸಮಾನತೆಯ ಕೇಂದ್ರಗಳು ಸರ್ವ ರೀತಿಯ ವಿಭಜನೆಯ ಸ್ಥಳಗಳಾಗಿವೆ. ಆತ್ಮ ಗೌರವವಿಲ್ಲದ, ಅಂತರ್ ದೃಷ್ಟಿ ಇಲ್ಲದ ಮಾಧ್ಯಮಗಳ ಹೊಣಗೇಡಿತನ ಸಮಾಜವನ್ನು ನಗ್ನಗೊಳಿಸುವುದಲ್ಲದೆ ನಗ್ನತೆಯ ಮುಗ್ಧತೆಯನ್ನೂ ಹಾಳು ಮಾಡಿದೆ. ಬೆಳಗಾದರೆ ನಾವು ಮಾಧ್ಯಗಳ ಮೂಲಕ ಕುಡಿಯುವ ರಕ್ತ ನಿತ್ಯ ಬಳಕೆಯ ನೀರಿಗಿಂತಲು ಅಧಿಕವಾಗಿದೆ, ಅಧಮವಾಗಿದೆ.
        ನಮ್ಮ ಸುತ್ತಲಿನ ಸತ್ಯವನ್ನು ದೂರಿಕರಿಸಿ ದೂರದ ಅವಾಸ್ತವವನ್ನು ನಂಬುವ ವರ್ತಮಾನದ ಯುವ ಜನಾಂಗ, ಕಾರ್ಪೊರೇಟ್ ವಲಯದ ಬಳಸಿ ಬಿಸಾಡುವ ಸಿದ್ಧಾಂತಕ್ಕೆ ಮರುಳಾಗಿದ್ದಾರೆ. ಅವಕಾಶಗಳ ಭ್ರಮೆಯನ್ನು ಹುಟ್ಟಿಸುವ ಈ ಬಿಕ್ಕಟ್ಟು, ಅದೇ ಕಾರ್ಪೊರೇಟ್ ವಲಯದಿಂದ, ಮತ್ತೆ ಅದೇ ಸಿದ್ಧಾಂತದಿಂದ ಮೋಸಕ್ಕೆ ಹೋಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತಿದೆ. ಓಡಿಹೋಗಲಾಗದ, ನಿಂತು ಬದುಕಲಾಗದ ಆದರೆ ನಿರಂತರ ಹುಚ್ಚು ಹುಡುಕಾಟಕ್ಕೆ ಹಚ್ಚುವ ಈ ಹವ್ಯಾಸ, ಎಲೆಕ್ಟ್ರಾನಿಕ್ ಮಾದ್ಯಮಗಳನ್ನು ನಂಬಿಕೊಂಡಿರುವವರಿಗೆ ಹುಡುಗಾಟವೆನ್ನಿಸಿದೆ. ಕಣ್ಣು ಕೋರೈಸುವ ಟ್ಯಾಬ್, ಮೋಬೈಲ್, ಕಂಪ್ಯೂಟರ್‍ಗಳು ಕಣ್ಣೀರೊರೆಸುವುದಿಲ್ಲ. ಫ್ಯಾಶನ್‍ನನ್ನು ಕುರಿತು ಮಾತಾಡುವ ಈ ಲೋಕ ಪ್ಯಾಶೆನ್ ಕುರಿತು ಮನುಷ್ಯನನ್ನು ಕೇಂದ್ರಿಕರಿಸುವುದಿಲ್ಲ. ಸಹನೆಯಂತೂ ಸತ್ತುಹೋದ ವಿಚಾರ. ಸಾಮಾಜಿಕ ತಾಣಗಳೆಂದು ಗುರುತಿಸಲ್ಪಡುವ ಈ ಅಂತರ್‍ಜಾಲ ತಾಣಗಳು ನಿಜವಾದ ಸಾಮಾಜಿಕತೆಯ ಮನುಷ್ಯ ಸೌಂದರ್ಯವನ್ನು ಕೊಂದು ಇರುವ ಮನೆಯಲ್ಲಿಯೇ ಒಬ್ಬ ಇನ್ನೊಬ್ಬನೊಂದಿಗೆ ಮಾತನಾಡದಂತೆ ಮಾಡಿ ಆತನನ್ನು ಭ್ರಮೆಗಳಿಂದ ತುಂಬುತ್ತದೆ. ನಾವು ಹೇಗೆ ಕಾಣಿಸಿಕೊಳ್ಳಬೇಕು ಎನ್ನುವುದನ್ನು ತಿಳಿಸುವ ಈ ಮಾರ್ಗ ನಾನು ಏನಾಗಬೇಕು ಎನ್ನುವುದಕ್ಕೆ ಕನ್ನಡಿ ಹಿಡಿಯುವುದಿಲ್ಲ. ಎಲೆಕ್ಟ್ರಾನಿಕ್ ಜಗತ್ತು ನಮ್ಮಲ್ಲಿ ಧೈರ್ಯವನ್ನು ಬೆಳೆಸಲಿಲ್ಲ, ಹೇಸಿ ಧೈರ್ಯವನ್ನ, ಭಂಡ ಧೈರ್ಯವನ್ನ ಬೆಳೆಸಿತು. ಆಳ ಅಧ್ಯಯನದ ಅವಶ್ಯಕತೆಯನ್ನು ದೂರಿಕರಿಸಿ ಮುಂಜಾನೆ ಕುಡಿಯುವ ಚಹಾ ಕುರಿತಾದ ತಿಳುವಳಿಕೆಗೂ ತನ್ನನ್ನು ಮೊರೆ ಹೋಗುವಂತೆ ಮಾಡಿತು. ದುಡ್ಡು, ಅವಕಾಶ ಎನ್ನುವ ಪದಗಳ ಬೆನ್ನು ಹತ್ತಿ ಆತ್ಮವನ್ನು ಧಿಕ್ಕರಿಸಿ ಅನ್ಯರ ಭಾವನೆಗಳನ್ನು ಅವಹೇಳಿಸಿ ಓಡಿಹೋಗುವ ನಿರ್ಲಜ್ಜತೆಯನ್ನು ಬೆಳೆಸಿತು. ಮುಂದಿನ ಮರೀಚಿಕೆಯನ್ನು ಮೆಚ್ಚಿಕೊಂಡವರು ಹಿಂದಣ ಅನಂತವನ್ನು ಅಸಹ್ಯಗೊಳಿಸುವ ಆತ್ಮ ಭ್ರಷ್ಟತೆಯನ್ನು ಬೆಳೆಸಿತು. ಈ ರೀತಿ ಬುಡವಿಲ್ಲವಾಗಿರುವ ಈ ನನ್ನ ಎಳೆಯ ಜಗತ್ತನ್ನು ನಾನು ವಾಟೆವರ್ ಜನರೇಶನ್ ಎನ್ನುತ್ತೇನೆ, ಎನ್ನುತ್ತಾರೆ ನನ್ನೊಂದಿಗಿದ್ದ ಗೆಳೆಯ ನವೀನ್. ಇದೊಂದು ಶೇಮ್‍ಲೆಸ್ ಸೋಸಾಯಿಟಿ ಎನ್ನುತ್ತಾರೆ ಹಿರಿಯ ಚಿಂತಕಿ ಡಾ.ಇಂದಿರಾ. ಈ ಬಿಕ್ಕಟ್ಟೆ ನಮ್ಮ ಮೂಲ. ಏಕೆಂದರೆ ವರ್ತಮಾನದ ಹೂಗಳನ್ನು ಧಿಕ್ಕರಿಸಿ ಭವಿಷ್ಯದ ಹಣ್ಣುಗಳ ಕನಸು ಕಾಣಲಾಗುವುದಿಲ್ಲ ಹಾಗೆಯೇ ನಮ್ಮ ಮುಂದೆಯೇ ನಾಶವಾಗುವ ಯುವಜನಾಂಗವನ್ನು ನಿರ್ಲಕ್ಷಿಸಿ ಭವಿಷ್ಯದ ಭವ್ಯ ಭಾರತವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ.

Wednesday 11 June 2014

ಕಾಫರ್‍ನ ಕೊನೆಯ ಪತ್ರಗಳು(Khawaja Ahemad Abbas)


K A Abbas with Jahana Ara
          1948 ರಲ್ಲಿ India Weekly ಯಲ್ಲಿ ಕೆ.ಎ.ಅಬ್ಬಾಸರು  ಕವಿ “ಸಾಹೀರ್‍ಗೊಂದು ಜಾಹೀರ್ ಪತ್ರ” ಎಂಬ ಶೀರ್ಷಿಕೆ ಅಡಿಯಲ್ಲಿ ಪತ್ರ ಬರೆದರು. ಆ ಪತ್ರದ ಒಕ್ಕಣಿಕೆ ಹೀಗಿತ್ತು.

ಪ್ರೀತಿಯ ಸಾಹೀರ್,
        ನೀನು ಯಾವ ಕಾಲಕ್ಕೂ ಭಾರತವನ್ನು ಬಿಟ್ಟು ಬಂದೆ ಎಂದುಕೊಳ್ಳಲಾಗದು. ಭಾರತದ ಪಂಚನದಿಗಳ ಪಂಜಾಬದ ಮಣ್ಣಿನ ವಾಸನೆಯ ನಿನ್ನ ಕವಿತೆ ಇಂದಿಗೂ ಅವಿಶ್ರಾಂತಿ ಆತ್ಮದಂತೆ ಇಲ್ಲಿಯೇ ಸುತ್ತುತ್ತಿದೆ. ನೀನು ಯಾವ ಕಾಲಕ್ಕೂ ಪಾಕಿಸ್ಥಾನಿಯನಾಗಲು ಸಾಧ್ಯವೇ ಇಲ್ಲ. ಕನಿಷ್ಟ ನಿನ್ನ ಹೆಸರಿನೊಂದಿಗೆ ಅಂಟಿಕೊಂಡ ಆ “ಲುಧಿಯಾನಾ” ಎಂಬ ಪದ ಇರುವವರೆಗೂ ಆದರು. ನೀನು ಪ್ರಪಂಚದ ಯಾವುದೇ ಮೂಲೆಯಲ್ಲಿರು, ನಿನ್ನ ಹೆಸರು ನೀನು ಬದಲಾಯಿಸಿಕೊಳ್ಳುವವರೆಗೂ ನೀನು ಭಾರತೀಯನೆ. ‘ಭಾರತದ ಕವಿಯೆ’ ಎಂಬುದನ್ನು ಮರೆಯಬೇಡ. ಒಂದು ವೇಳೆ ನೀನು ಪಾಕಿಸ್ಥಾನಿಯನೇ ಆಗಬೇಕಾದರೆ ನಿನ್ನ ಪಾಕಿಸ್ಥಾನ ಭಾರತದ ಲುದಿಯಾನಾವನ್ನು ಗೆಲ್ಲಬೇಕಷ್ಟೆ. ಅದು ಪಾಕಿಸ್ಥಾನಕ್ಕೆ ಈ ಜನ್ಮದಲ್ಲಿ ಸಾಧ್ಯವಾಗದ ಮಾತು. ಪ್ರೀತಿಯಿಂದ ಕರೆಯುತ್ತೇನೆ. ನೀನು ಮರಳಿ ಬಂದುಬಿಡು.
                                                                                  ಇಂತಿ ನಿನ್ನ
                                                                                   ಖ್ವಾಜಾ
       ಹಿಂದಿ, ಇಂಗ್ಲೀಷ್ ಹಾಗೂ ಉರ್ದು ಭಾಷೆಗಳಲ್ಲಿ ಎಪ್ಪತ್ತಕ್ಕು ಹೆಚ್ಚು ಕೃತಿಗಳನ್ನು ರಚಿಸಿ, ‘ಸನ್ ಆಫ್ ಇಂಡಿಯಾ’ ಕೃತಿ ಬರೆದು ರಷ್ಯಾದಲ್ಲಿ ಎಂಬತ್ತು ಸಾವಿರ ಪ್ರತಿಗಳ ಮಾರಾಟದ ದಾಖಲೆಯನ್ನು ನಿರ್ಮಿಸಿ, ತಮ್ಮ ಅನೇಕ ಕೃತಿಗಳನ್ನು ಜಗತ್ತಿನ ಒಂಬತ್ತು ಭಾಷೆಗಳಲ್ಲಿ ಪ್ರಕಟಿಸಿ, ಪದ್ಮಭೂಷಣದಂಥ ಪ್ರಶಸ್ತಿಯನ್ನು ಪಡೆದೂ ಬದುಕಿನ ಕೊನೆಯ ದಿನಗಳಲ್ಲಿ ತಮ್ಮ ಅಕೌಂಟಿನಲ್ಲಿ ಕೆಲವು ಸಾವಿರ ಹಣವನ್ನು ಹೊಂದಿರದ ಈ ಅಬ್ಬಾಸ್ ಎಂಥ ವಾಸ್ತವವಾದಿಯಾಗಿದ್ದ ಮತ್ತು ಈ ನೆಲವ ನಂಬಿದ ಮಹಾನ್ ವ್ಯಕ್ತಿಯಾಗಿದ್ದ ಎನ್ನುವುದಕ್ಕೆ ಈ ಮೇಲಿನ ಪತ್ರ ಒಂದು ಅದ್ಭುತ ನಿದರ್ಶನ. ಹಲವು ಭ್ರಮೆಗಳ ಬೆನ್ನೇರಿ ದೇಶ ಬಿಟ್ಟು ಹೋಗಿದ್ದ ಶ್ರೇಷ್ಠ ಸಾಹಿತಿ ಸಾಹಿರ್ ಲುಧಿಯಾನ್ವಿಗೆ ಬರೆದ ಅಬ್ಬಾಸರ ಈ ಪತ್ರ ಇಂದಿಗೂ ದೇಶ ತೊರೆಯುವವರಿಗೆ ಒಂದು ಮಾನವೀಯ ಕರೆಯೇ.
Abbas with his Adapted Daughter

1903 ಜೂನ್ 7 ರಂದು ಪಾಣೀಪತ್ತದಲ್ಲಿ ಜನಿಸಿದ ಖ್ವಾಜಾ ಅಹಮ್ಮದ್ ಅಬ್ಬಾಸರ ತಂದೆ, ಆಯುರ್ವೇದ ಔಷಧಿಗಳ ವ್ಯಾಪಾರಿ. ಇಸ್ಲಾಂನ ಸರಳ ಜೀವನ ಹಾಗೂ ಸಿದ್ಧಾಂತಗಳಲ್ಲಿ ಅಪಾರ ವಿಶ್ವಾಸ ಇರಿಸಿಕೊಂಡವರು. ಒಡೆಯ, ಆಳುಮಗ ಎನ್ನುವ ವ್ಯತ್ಯಾಸದ ಕಾರಣ ಯಾರನ್ನೇ ಕೀಳಾಗಿ ಕರೆಯುವುದನ್ನು, ಮದುವೆ ಮುಂಜಿವೆಗಳಲ್ಲಿ ಧರ್ಮದ ಹೆಸರಿನಲ್ಲಿ ಮಾಡುವ ದುಂದುವೆಚ್ಚವನ್ನು ಮತ್ತು ಅಂದಿನ ದಿನಗಳಲ್ಲಿ ಸಂಪ್ರದಾಯಸ್ಥ ಮುಸ್ಲಿಂರಲ್ಲಿ ಹಾಗೂ ರಜಪೂತರಲ್ಲಿ ರೂಢಿಯಲ್ಲಿದ್ದ ಪರದಾ ಪದ್ಧತಿಯನ್ನು ಉಗ್ರವಾಗಿ ಖಂಡಿಸಿದ ಪ್ರಗತಿಪರ ವಿಚಾರವಾದಿ ಅಬ್ಬಾಸರ ತಂದೆ. ಮೆಟ್ರಿಕ್ಯುಲೇಶನ್‍ವರೆಗೆ ಪಾಣಿಪತ್‍ನಲ್ಲೇ ಓದಿದ ಅಬ್ಬಾಸನಿಗೆ ನಗುನಗುತ್ತಲೇ ನೇಣುಗಂಬ ಏರಿದ ಭಗತ್‍ಸಿಂಗ್ ಹಾಗೂ ಹಿರಿಯ ಮಿತ್ರ ಬಾಲ್ಯಸ್ನೇಹಿತರು.
1935 ರಲ್ಲಿ ಅಲೀಘಡ ವಿಶ್ವವಿದ್ಯಾಲಯದಿಂದ ಕಾನೂನು ಪದವೀಧರರಾಗಿ ಹೊರಬಂದ ಅಬ್ಬಾಸರು ಇಂಗ್ಲಿಷ್ ಸಾಹಿತ್ಯವನ್ನು ತೆಗೆದುಕೊಂಡು ಎಂ.ಎ.ಓದಲು ಮುಂದುವರಿಸಿದರಾದರೂ ಅಲೀಘಡ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಕಟ್ಟಡದ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ ಆಪಾದನೆಯ ಮೇಲೆ ಹೊರಹಾಕಲ್ಪಟ್ಟರು. ವಿದ್ಯಾರ್ಥಿ ಜೀವನದಲ್ಲಿ ಅವರ ಈ ತರಹದ ಕಾರ್ಯಗಳು ಹಲವಾರು. ದೇಶಭಕ್ತಿಯ ದೊಡ್ಡ ಸಂಪ್ರದಾಯದ ಹಿನ್ನಲೆಯಲ್ಲಿ ಬೆಳೆದ ಅಬ್ಬಾಸರ ಹೆಜ್ಜೆಗಳು, ನಡೆ-ನುಡಿಗಳು ಸ್ಪಷ್ಟ ಹಾಗೂ ನೇರ. ಅವರ ಬಾಲ್ಯದ ಇನ್ನೊಂದು ಘಟನೆ ಹೀಗಿದೆ : ಪ್ರಾಥಮಿಕ ಶಾಲಾ ಮೇಲ್ವಿಚಾರಣೆಗೆ ಬಂದ ಆಂಗ್ಲ ಅಧಿಕಾರಿಯೊಬ್ಬ ಕೇಳಿದ ‘ಭಾರತಕ್ಕೆ ಬ್ರಿಟೀಷ್ ಸಾಮ್ರಾಜ್ಯ ನೀಡಿದ ವರಗಳೇನು?’ ಎಂದು. ರೈಲ್ವೇ, ಸಡಕೇಂ, ಢಾಕಖಾನೇಂ, ದವಾಖಾನೇಂ....ಎಂದು, ಮುಂದಿನ ಇನ್ನೊಂದು ಖಾನೇಂ ಹೇಳದೆ ಕುಳಿತ ಇನ್ನೊಬ್ಬ ಹುಡುಗ. ತಕ್ಷಣ ಅಬ್ಬಾಸ್ ಎದ್ದು ನಿಂತು ಉತ್ತರಿಸಿದ ‘ಬಂಧೀಖಾನೆ’ ಎಂದು.
ಶಿಕ್ಷಣದ ನಂತರ ಅಬ್ಬಾಸ್ ಆಯ್ದುಕೊಂಡ ವೃತ್ತಿ ಪತ್ರಿಕೋದ್ಯಮ. ಪತ್ರಕರ್ತನೋರ್ವ ಆ ಅನಿಶ್ಚಿತ ಬದುಕನ್ನು ಎಷ್ಟೊಂದು ಪ್ರೀತಿಸಿರುತ್ತಾನೆ ಎನ್ನಲು ಅಬ್ಬಾಸರ ಜೀವನ ಒಂದು ಶ್ರೇಷ್ಠ ನಿದರ್ಶನ. 50 ರೂ. ಸಂಬಳದೊಂದಿಗೆ ಪ್ರಾರಂಭವಾದ ಅವರ ಪತ್ರಿಕೋದ್ಯಮದ 61 ವರ್ಷದ ದೀರ್ಘ ಜೀವನದಲ್ಲಿ ಮಾಡಿದ ಸಾಹಸಗಳು, ಇಂದು ಕೋಟ್ಯಾಂತರ ರೂಪಾಯಿಗಳಿರುವ ವ್ಯಕ್ತಿಗೂ ಸಾಧ್ಯವಿಲ್ಲ. ತಮಗೆ ಸಿಗುತ್ತಿದ್ದ 50 ರೂ.ದೊಂದಿಗೆ ಮಾನವ ಹೃದಯಗಳ ವೈಶಾಲ್ಯವನ್ನು ನಂಬಿಕೊಂಡಿದ್ದ ಅಬ್ಬಾಸರಿಗೆ ಯಾವ ಸಾಹಸಗಳೂ ಸಮಸ್ಯೆಯಾಗಲಿಲ್ಲ. ಅವರು ಜೇಬಿನಲ್ಲಿ ದುಡ್ಡಿರದಿದ್ದರೂ ವಿಶ್ವವಿಹಾರದ ಕನಸಿನ ನಕ್ಷೆ ಹಾಕುತ್ತಿದ್ದರು. ತಮಗೆ ಊಟಕ್ಕೆ ಇಲ್ಲದ ಸಮಯದಲ್ಲಿಯೂ ಅತಿಥಿಗಳಿಗೆ ಭಾರೀ ಭೋಜನದ ಆಮಂತ್ರಣ ಪತ್ರ ನೀಡುತ್ತಿದ್ದರು. ತಮಗೇ ನೆಲ ಇಲ್ಲದ ಅನಿಶ್ಚಿತ ಕಾಲದಲ್ಲಿಯೂ ರಷ್ಯಾದೊಂದಿಗೆ ಜಂಟಿ ಚಿತ್ರ ನಿರ್ಮಾಣಕ್ಕೆ ಸಹಿ ಹಾಕುತ್ತಿದ್ದರು. ಯಾಕೆಂದರೆ ‘ದಾರಿ ಸಾವಿರ ಉಂಟು ಬೆಳಕಿನರಮನೆಗೆ’ ಎಂಬುದು ಅವರ ವಾದ.
          ರೈಲ್ವೆ ಸ್ಟೇಶನ್‍ಗಳಲ್ಲಿ, ಬಸ್‍ಸ್ಟ್ಯಾಂಡ್‍ಗಳಲ್ಲಿ, ವಿಮಾನಯಾನದಲ್ಲಿ, ಕಿಕ್ಕಿರಿದ ಫುಟ್‍ಪಾತ್ ಬೆಂಚುಗಳ ಮೇಲೆ, ಉಳಿದುಕೊಂಡ ಲಾಡ್ಜಗಳಲ್ಲಿ ಎಲ್ಲೆಂದರಲ್ಲಿ ಕುಳಿತು ಸಾಹಿತ್ಯ ರಚಿಸುತ್ತ ಹೋದ ಅಬ್ಬಾಸ್ ನಮ್ಮಂತೆ ಪಂಚತಾರಾ ಹೋಟೆಲುಗಳಲ್ಲಿ ಸೃಷ್ಠಿಯಾಗುವ ಕೂದಲು ಸೀಳುವ ಸಾಹಿತ್ಯವನ್ನು ರಚಿಸಲಿಲ್ಲ. ಸಾಮಾನ್ಯರ ಮಧ್ಯ, ಸಾಮಾನ್ಯರಂತೆ, ಸಾಮಾನ್ಯನ ಸಮಸ್ಯೆಗಳನ್ನು ಕುರಿತು ಬರೆದರು.
          ವೃತ್ತಿ ಭರವಸೆ ಇಲ್ಲದೆ ಕೆಲವೊಮ್ಮೆ ಪತ್ರಕರ್ತ, ಕೆಲವೊಮ್ಮೆ ಚಿತ್ರ ನಿರ್ದೇಶಕ, ನಿರ್ಮಾಪಕ, ಕೆಲವೊಮ್ಮೆ ರಾಜಕೀಯ ಸಲಹೆಗಾರ, ಕೆಲವೊಮ್ಮೆ ಸಾಹಿತಿ ಹೀಗೆ ಅಬ್ಬಾಸರದು ಬಹುರೂಪಿಯ ಬದುಕು. ದೇಶ ವಿಭಜನೆಯ ನಂತರ ಕುಲಬಾಂಧವರೆಲ್ಲ ಪಾಕಿಸ್ತಾನಕ್ಕೆ ಹೋದರು. ಇನ್ನೂ ಮೂವತ್ತು ವರ್ಷಗಳ ಬದುಕು ಬಾಕಿ ಇರುವಾಗ ಪ್ರೀತಿಯ ಹೆಂಡತಿ ಮುಜ್ಜಿ ತೀರಿಹೋದರು. ಅಬ್ಬಾಸರಿಗೆ ಮಕ್ಕಳಂತೂ ಆಗಲೇ ಇಲ್ಲ. ಪಾಣಿಪತ್ತಿನಿಂದ ದೆಹಲಿ, ದೆಹಲಿಯಿಂದ ಮುಂಬೈ ಎಂದು ಅಲೆದಾಡಿಕೊಂಡಿದ್ದ ಅಬ್ಬಾಸರಿಗೆ ಒಂದು ನೆಲೆ ಎಂಬುದೂ ಇರಲಿಲ್ಲ. ಅಬ್ಬಾಸ್ ಕಮ್ಯುನಿಸ್ಟರಲ್ಲಿ ಕಾಂಗ್ರೆಸಿಗನಂತೆ, ಕಾಂಗ್ರೆಸಿಗರಲ್ಲಿ ಕಮ್ಯುನಿಸ್ಟರಂತೆ ಕಂಡರು. ಸಾಹಿತಿಗಳಲ್ಲಿ ಸಿನಿಮಾದವರಂತೆ, ಸಿನಿಮಾದವರಿಗೆ ಸಾಹಿತಿಯಂತೆ ದೂರ ಉಳಿದವರಾದರು. ಎಂಷ್ಟೆ ವಿಶಾಲ, ಮಾನವೀಯ ಬದುಕನ್ನು ಬದುಕಿದರೂ ಅಬ್ಬಾಸ್ ಹಿಂದೂಗಳಿಗೆ ಮುಸ್ಲಿಂರಂತೆ, ಮುಸ್ಲಿಂರಿಗೆ ಕಾಫಿರ್‍ನಂತೆ ಕಂಡರು. ಆದರೆ ಅಂತರಂಗದಲ್ಲಿ ಇವೆರಡೂ ಅಲ್ಲದ ಅಬ್ಬಾಸ್ ಒಬ್ಬ ಫಕೀರನಾಗಿದ್ದ, ಸೂಪಿಯಾಗಿದ್ದ ಲೋಕದ ಸಂತೆಯಲ್ಲಿ ನಿಂತ ಸಂತರಾಗಿದ್ದರು.
       ಕಾಲನ ಕೈ ಯಾರನ್ನೂ ಬಿಡುವುದಿಲ್ಲ. ಅದು ಅಬ್ಬಾಸರನ್ನೂ ಬಿಡಲಿಲ್ಲ. ಬೊಂಬಾಯಿಯ ಭೀಷಣ ಬದುಕಿನಲ್ಲಿ ಪ್ರೀತಿಯ ಹೂ ಆಗಿದ್ದ ಅಬ್ಬಾಸ್ ಕೊನೆಕೊನೆಗೆ ಪಾಶ್ರ್ವವಾಯುವಿನಿಂದ ಬಳಲಿದರು. ಮುಪ್ಪಾವಸ್ಥೆಯ ಮಂದವಾದ ಕಣ್ಣಿನ ಬೆಳಕಿನಿಂದಾಗಿ ಕನಲಿದರು. ಅಬ್ಬಾಸರ ದೇಹಕ್ಕೆ ಮುಪ್ಪು ಬಂತು. ಆದರೆ ಮನಸ್ಸಿಗೆ ಯೌವ್ವನವೇ ಇತ್ತು. ಭಾರತ ಎನ್ನುವ ‘ವೇಸ್ಟ್‍ಲ್ಯಾಂಡ್’ ನಲ್ಲಿ ‘ಥೈರಾಸಸ್’ನಂತೆ ಉಳಿದುಕೊಡಿದ್ದ ಅಬ್ಬಾಸರು ಬೊಂಬಾಯಿಯ ಜುಹುದ ದಂಡೆಯ ಮೇಲೆ ಕುಳಿತು ಮಾನವ ಮನಸ್ಸುಗಳ ಬಿಸುಪಿಗಾಗಿ ಕಾತರಿಸುತ್ತಿದ್ದರು. ಯಾಕೆಂದರೆ ಮಾನವ ಸಂಬಂಧಗಳಿಲ್ಲದ ಒಂದು ದಿನದ ಬದುಕೂ ಅಬ್ಬಾಸರಿಗೆ ಬಂಜರು ಎನ್ನಿಸುತ್ತಿತ್ತು.
       ಹೀಗೆ ದೇಶಪ್ರೇಮ, ಮಾನವ ಪ್ರೇಮ, ಪತ್ರಿಕಾ ಪ್ರೇಮದ ಪೂಜಾರಿಯಾಗಿದ್ದ ಅಬ್ಬಾಸ್ ಹಲವಾರು ರಂಗಗಳಲ್ಲಿ ತಾವೇ ‘ಮೊದಲ ಪುಟ’ವಾಗಿ ಆರಂಭಿಸಿದರು. ಮತ್ತು ತಾವೇ ‘ಕೊನೆಯ ಪುಟ’ವಾಗಿ ಹೋದರು. ಮರೆವಿನ ಮಾಯೆ ಅನಂತರ ಎಲ್ಲವನ್ನೂ ಮುಚ್ಚಿ ಹಾಕಿದಳು. ಆದರೆ ಅವರ ಕೊನೆಯ ಈ ಪುಟವನ್ನು ಮಾತ್ರ ಮರೆಸುವಲ್ಲಿ ಸೋತು ಹೋದಳು. ಅಬ್ಬಾಸ್ ತಮ್ಮ ಮರಣೋತ್ತರ ಪತ್ರದಲ್ಲಿ ಹೀಗೆ ಬರೆಯುತ್ತಾರೆ:
        “ನನ್ನ ಶವಯಾತ್ರೆಯ ಮುಂದೆ ನನ್ನ ಮೆಚ್ಚಿನ ಮಹಾರಾಷ್ಟ್ರದ ಲೇಝಿಮ್ ಯುವಕರ ಗುಂಪಿರಲಿ, ಅದರ ಸದ್ದು ನನ್ನ ಆದರ್ಶ ಮಹಾತ್ಮ ಗಾಂಧಿಯ ಮೂರ್ತಿಯ ಸಮೀಪ ಬರುವವರೆಗೆ ಮಾತ್ರ ಕೇಳುತ್ತಿರಲಿ. ಬದುಕೆಲ್ಲ ಸಮಯದ ಕೊರತೆಯಿಂದ ನಾನು ಪೂರ್ತಿ ಪ್ರೀತಿ ಕೊಡಲಾಗದ ನನ್ನ ಹೆಂಡತಿ ‘ಮುಜ್ಜಿ’ಯ ಪಕ್ಕದ ಗೋರಿಯೇ ನನ್ನದಾಗಿರಲಿ. ಜೀವನವಿಡೀ ನಿರೀಶ್ವರವಾದಿಯಾಗಿದ್ದ ನನ್ನ ಸಾವಿನ ದಿನಕ್ಕೆ ಒಬ್ಬ ಪಾದ್ರಿ, ಬೌದ್ಧಗುರು, ಇನ್ನೊಬ್ಬ ಜೈನಗುರು ಉಪಸ್ಥಿತರಿರಲಿ. ಪತ್ರಿಕಾ ಜೀವನದ 47 ವರ್ಷದ ನನ್ನ ಪ್ರೀತಿಯ ‘ಕೊನೆಯ ಪುಟ’ದ ಎಲ್ಲ ಲೇಖನಗಳೂ ನನ್ನ ಸಮಾಧಿಯೊಳಗಿನ ಹಾಸಿಗೆಯಾಗಿರಲಿ, ನನ್ನ ದೇಹದ ಮೇಲೆ ಹೆಣದ ಬಟ್ಟೆಯಾಗಿರಲಿ, ಇಲ್ಲಿ ಮರುಜನ್ಮ ಎಂಬುದರಲ್ಲಿ ನನಗೆ ನಂಬಿಕೆಯಿಲ್ಲ. ನಿಮ್ಮನ್ನೆಲ್ಲ ಮರಳಿ ಕಾಣುವ ಭರವಸೆಯಿಲ್ಲ. ಹಾಗೇನಾದರೂ ನನ್ನನ್ನು ಕಾಣುವ ಆಶೆ ನಿಮಗಾದರೆ ನನ್ನ ಎಪ್ಪತ್ತು ಪುಸ್ತಕಗಳನ್ನು ಓದಿ ಆನಂದಿಸಿ ನನ್ನ ಮೂವತ್ತು ಚಿತ್ರಗಳನ್ನು ನೋಡಿ ಸಂತೋಷ ಪಡಿ. ಅಲ್ಲಿದೆ ನನ್ನ ಚೇತನ.
                                                                    ಇಂತು                                                                                         ಕೆ.ಎ.ಎ.