Sunday 28 April 2013

ಸಾವೇ ನೀ ಗೆಲ್ಲಲಿಲ್ಲ?!




“Oh! lightly, lightly tread!
 A holy thing is sleep,
on the worm spirit shed
And eyes that wake to weep.’’
                                      - Mrs Hemans

ಕವಿ ಇ. ಬಿ. ಬ್ರೌನಿಂಗ್ ಬರೆದ ಪದ್ಯವೊಂದನ್ನೂ ನಾನು ಬಹಳ ಹಿಂದೆ ಕನ್ನಡಿಸಿದ್ದೆ. ಪ್ರಿಯ ಗೆಳತಿಯನ್ನು ಮುಂದೆ ಕೂಡ್ರಿಸಿಕೊಂಡು, ಕಣ್ಣಲ್ಲಿ ಕಣ್ಣಿಟ್ಟು, ತನ್ನ ಬಿಸಿಯುಸಿರ ಆಕೆಯ ಕೆನ್ನೆ ತಾಗಿಸುತ್ತ, ಆಕೆಯ ಕಿವಿಗಳಲ್ಲಿ ಪಿಸುಗುಡುತ್ತಾನೆ-
ನಾ ಹೇಗೆ ಪ್ರೀತಿಸಲಿ ನಿನ್ನ
ಎಣಿಸಬಿಡು ದಾರಿಗಳ ಚಿನ್ನ............
ನಾ ನಿನ್ನ ಪ್ರೀತಿಸುವೆ
ನನ್ನ ಮುಪ್ಪಿನ ಅಳಲು, ಬಾಲ್ಯದ ಬಳಲು
ಯೌವ್ವನದ ಹುಚ್ಚು ಕನಸುಗಳೊಂದಿಗೆ,
ನಾ ನಿನ್ನ ಪ್ರೀತಿಸುವ ಪ್ರೀತಿಯೊಂದಿಗೆ
ಬಿಡುವ ನನ್ನ ಆತ್ಮದ ಕೊನೆಯುಸಿರಿನೊಂದಿಗೆ
ನಾ ನಿನ್ನ ಪ್ರೀತಿಸುವೆ ಸಾವಿನಾಚೆಯೂ ಚಿನ್ನ
ಬದುಕಲ್ಲಿ ಪ್ರೀತಿಸಿದಕ್ಕಿಂತ ನಿನ್ನ.............
K A Abbas
ಈ ಮೇಲಿನ ಪದ್ಯ ಓದಿದಂತೆ, Earnest Hemingway  ಯ Farewell to Arms ಕಾದಂಬರಿ ಹಾಗೂ ಅದರೊಳಗಿನ ನಾಯಕ ಮತ್ತು ನಾಯಕಿಯ ಅನನ್ಯ ಪ್ರೀತಿಯ ಕುರಿತು ಓದಿದಾಗಲೆಲ್ಲ ನನಗೆ ನೆನಪಾದುದು ಅಬ್ಬಾಸರ ದಾಂಪತ್ಯದ ಪುಟಗಳು. ಈ ಫಕೀರ ಬೆಳ್ಳಿ ಪರದೆಯ ಮೇಲೆ ಬೆಳಕು ಹೊತ್ತಿಸುವಂತೆ ಮಾಡಿದವಳೆ ಅವರ ಪ್ರೀತಿಯ ಪತ್ನಿ ಮುಜ್ಜಿ, ಅಲಿಯಾಸ್ ಮುಜತಾಬಾಯಿ ಖಾತೂನ್. ಮುಜ್ಜಿಯ ಬಗೆಗೆ ಬರೆಯದೇ ಹೋದಲ್ಲಿ ಅಬ್ಬಾಸರ ಸಿನಿಮಾ ಗಾಥೆ ಅಪೂರ್ಣ ಎನ್ನಿಸಿದೆ ನನಗೆ. ಯಾಕೆಂದರೆ ಈ ಮುಜ್ಜಿಯೇ ಅಬ್ಬಾಸರಿಗೆ “ಡಾಕ್ಟರ್ ಕೊಟ್ನಿಸ್ ಕಿ ಅಮರ್ ಕಹಾನಿ” ಚಿತ್ರಕ್ಕೆ ಕಥೆ ಆಯ್ದುಕೊಟ್ಟವಳು.
Dr.Kotnis ki amar Kahani

 ಅಬ್ಬಾಸ್ ಬಹುಪಾಲು ಚಿತ್ರಗಳ ಚಿತ್ರೀಕರಣ ಸಂದರ್ಭದಲ್ಲಿ ಸೆಟ್ ಮೇಲಿನ ಕಲಾವಿದರಿಗೆಲ್ಲ ಊಟ ಬಡಿಸಿ ಅನ್ನಪೂರ್ಣೆಯಾದವಳು. “ನೀವೆಂದಿಗೂ ಸ್ಟಾರ್‌ಗಳನ್ನು ಹಾಕಿಕೊಂಡು ಸಿನಿಮಾ ಮಾಡಬಾರದು, ಬದಲಾಗಿ ನಿಮ್ಮಿಂದ ಸ್ಟಾರ್‌ಗಳು ಹುಟ್ಟಬೇಕು” ಎಂದು ಅಬ್ಬಾಸರನ್ನೇ ನಿರ್ದೇಶಿಸಿದವಳು ಈ ಮುಜ್ಜಿ. ಈಕೆ ದಾಸಿಯಾಗಿ ಬಂದಳು. ದಾಸಿಯಂತೆಯೇ ಬದುಕಿದಳು ಆದರೂ ಅಬ್ಬಾಸರ ಜೀವನ ಪುಟಗಳಲ್ಲಿ ಮಾತ್ರ ದೇವತೆಯಂತೆ, ತಾಯಿಯಂತೆ, ಕತ್ತಲಲ್ಲಿ ದಾರಿ ತೋರಿದ ಬೆಳಕಿನಂತೆ ಚಿತ್ರಿಸಲ್ಪಟ್ಟ್ಟಿದ್ದಾಳೆ.ಹಾಗಂತ ಇವಳೇನು ಬಹಳ ದೊಡ್ಡ ಹಿನ್ನೆಲೆಯಿಂದ ಬಂದವಳು ಎಂದುಕೊಳ್ಳಬೇಡಿ. ಆಕೆಯ ಹಿನ್ನಲೆ ಮಾನವ ಮೌಲ್ಯಗಳ ಓದಿನ ಸಹನೆಯ ಸಂಸ್ಕಾರವಷ್ಟೆ. ಸಾಧಾರಣ ಸುಂದರಿ, ಅತೀ ಚಿಕ್ಕ ವಯಸ್ಸಿನಲ್ಲಿಯೇ ಕನ್ನಡಕ ಬಂದಿತ್ತು. ಈಕೆಯ ಅಕ್ಕನನ್ನು ನೋಡಿ ಹುಚ್ಚರಾಗಿದ್ದ ಅಬ್ಬಾಸ ಅವಳನ್ನು ಮದುವೆಯಾಗಬೇಕು ಅಂದುಕೊಂಡವರು. ಅವಳ ಮದುವೆಯಾಯಿತು ಎಂದು ಕೇಳಿದಾಗ ಅಬ್ಬಾಸ್ ಒಳಗೊಳಗೇ ಕಣ್ಣೀರು ಸುರಿಸಿದ್ದರು. ಮುಜ್ಜಿಯ ತಂದೆ ಪೋಲೀಸ್ ಅಧಿಕಾರಿ. ಆದರೆ ಹೆಸರಿಗಷ್ಟೆ. ನಡು ಯೌವ್ವನದಲ್ಲಿಯೇ ಈ ಎರಡು ಹೆಣ್ಣು ಮಕ್ಕಳ ಜನನದ ನಂತರ ಹೆಂಡತಿಯನ್ನು ಕಳೆದುಕೊಂಡು ವಿಧುರನಾದ ಈ ಮನುಷ್ಯ ಸದಾ ಸೂಫಿ ಹಾಗೂ ಹಿಂದೂ ಯೋಗಿಗಳ ಸಂಪರ್ಕದಲ್ಲಿದ್ದ. ಇಡೀ ಬದುಕನ್ನು ಯೋಗ ರಹಸ್ಯವನ್ನು ಅರಿಯುವಲ್ಲಿ ಕಳೆದುಬಿಟ್ಟ.
ಸೇವೆ ಮುಜತಾಬಾಯಿಯ ಭಾಷೆಯಾಗಿತ್ತು. ಈ ಸೇವೆಯ ಅಬ್ಬಾಸರು ಈಕೆಯತ್ತ ಆಕರ್ಷಣೆಗೊಳ್ಳಲು ಕಾರಣವಾಗಿತ್ತು. ಅಬ್ಬಾಸರ ತಂದೆ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಾಗ ಸೇವೆ ಮಾಡಿ ಮೌನ ಕ್ರಾಂತಿಯನ್ನೇ ಮಾಡಿದಳು. ಈಗಷ್ಟೇ ಆಕೆ ಅಲಿಘರ್ ಗರ್ಲ್ಸ್ ಕಾಲೇಜಿನ ಪಿ.ಯು.ಸಿ.ಯ ಷೋಡಶಿ ಈಕೆಯೊಂದಿಗೆ ಮದುವೆಯಾದಾಗ ಅಬ್ಬಾಸರಿಗೆ ೨೮ ವರ್ಷ. ಮುಜ್ಜಿಗೆ ೧೮ ವರ್ಷಗಳಷ್ಟೆ. ಮುಜ್ಜಿ ಅಲೀಘರ್ ವಿಶ್ವವಿದ್ಯಾಲಯದಿಂದ ಬಿ.ಎ. ಪಡೆದ ಪ್ರಗತಿಶೀಲ ಮುಸ್ಲಿಂ ಮಹಿಳೆ. ಆಗಲೇ ಹೇಳಿದೆನಲ್ಲ ಮುಜ್ಜಿ ಶ್ವೇತ ಸುಂದರಿಯಾಗಿರಲಿಲ್ಲ. ಸದಾ ಕನ್ನಡಕ, ಕೈ ಮೇಲೊಂದು ಕಪ್ಪು ಕಲೆ, ಕೃಷದೇಹ. ಆದರೆ ಶಿಕ್ಷಣವೇ ಅವಳ ಸೌಂದರ್ಯವಾಗಿತ್ತು. ಇಂಥ ಹುಡುಗಿಗೆ ಅಬ್ಬಾಸ್ ಮದುವೆಗೂ ಮುಂಚೆ ಪತ್ರ ಬರೆದು ಹೀಗೆ ಹೇಳಿದ್ದರು- “ಆದಾಗ್ಯೂ ನಾನು ನಿನ್ನನ್ನು ಈ ಬದುಕಿನಲ್ಲಿ ನನ್ನ ಸಾಹಸಗಳ, ಸೋಲು-ಗೆಲುವುಗಳ, ಸುಖ-ದುಃಖಗಳ ಸಂಗಾತಿಯಾಗಿ ಬರುವಿಯಾದರೆ ಬಂದುಬಿಡು ಎಂದು ಆಮಂತ್ರಿಸುತ್ತೇನೆ” ಎಂದು ಬರೆದಿದ್ದರು. ವಾರದ ನಂತರ ಉತ್ತರ ಬಂದಿತು- “ಒಪ್ಪಿದ್ದೇನೆ, ಇದೇ ತಾನೆ ಜೀವನ, ಇದೇ ಇದೇ ಅಲ್ಲವೆ ನಾನು ಬಯಸಿದ್ದು. ಆದರೆ ನಾನು ಸ್ವಾವಲಂಭಿ ಹಾಗೂ ಸಮಾನಳಾಗಿರಬೇಕೆಂಬ ನನ್ನ ಹಕ್ಕನ್ನು ನಾನು ಪ್ರತಿಪಾದಿಸುತ್ತೇನೆ” ಎಂದು ಬರೆದಳು. ಮದುವೆಯಾಗಿ ಮುಜ್ಜಿ ದೆಹಲಿಯಿಂದ ಬೊಂಬಾಯಿಗೆಬರುತ್ತ ಟ್ರೇನಿನಲ್ಲಿ ಬುರ್ಖಾ ಕಿತ್ತಿಸೆದವಳು ಇನ್ನೆಂದೂ ತೊಡಲಿಲ್ಲ. ಬೊಂಬಾಯಿಯ ವಿಕ್ಟೋರಿಯಾ ಗಾರ್ಡನ್ ಬಳಿಯ ಅಬ್ಬಾಸರು ಆನಂತರ ಎಂಬತ್ತು ರೂಪಾಯಿಯ ಬಾಡಿಗೆ ನೀಡಿ ಶಿವಾಜಿ ಪಾರ್ಕ್ ಬಳಿ ದೊಡ್ಡಮನೆ ಮಾಡಿದರು. ಬಾಡಿಗೆ ಬಹಳವಾಯಿತು ಎಂದು ಅಬ್ಬಾಸ್ ಚಿಂತಿತರಾದಾಗ ಮುಸಿನಕ್ಕು ಮುಜ್ಜಿ ಹೇಳಿದರು “ನಾನಿದ್ದೇನೆ, ಸಾಧ್ಯವಾದರೆ ಯಾವುದಾದರೂ ನೌಕರಿ ಮಾಡುತ್ತೇನೆ, ಚಿಂತೆ ಮಾತ್ರ ಬೇಡ” ಎಂದಳು. ಈಗ ಅಬ್ಬಾಸ್ Indian Peoples  Theatre Association ಗಾಗಿ “ಜುಬೈದಾ” ನಾಟಕ ಬರೆಯುತ್ತಿದ್ದರು. ಪದೇ ಪದೇ ಚಹ ಕುಡಿದರೆ ಪಿತ್ತವಾದೀತು ಎಂದು ಮುಜ್ಜಿ ಲೆಮನ್ ಚಹಾದ ಮಗ್ಗ್ ಹಿಡಿದುಕೊಂಡೇ ಕುಳಿತಿರುತ್ತಿದ್ದರು.
ಹೀಗಿತ್ತು ಅಬ್ಬಾಸರ ಸಂಸಾರ. ಅವರಿಗೆ ಮಕ್ಕಳಾಗಿರಲಿಲ್ಲ. ಆದರೆ ಅವರಂತೆ ಉದ್ಯೋಗ ಅರಸುತ್ತ ಬಂದ ದೇವಾನಂದ, ಇಂದರ್ ರಾಜ್ ಆನಂದ ಹಾಗೂ ಇತರರಿಗೆ ಅದೇ ಮನೆಯಲ್ಲಿ ಇಟ್ಟುಕೊಂಡು ಬೆಳೆಸು ಭಾಗ್ಯ ಮುಜ್ಜಿಯ ಹಣೆಬರಹದಲ್ಲಿ ಇತ್ತಲ್ಲ. ಹೀಗೆ ಮುಜ್ಜಿ ಎಂದರೆ ಪ್ರೀತಿ, ಸಾಯಂಕಾಲದ ವಾಯು ವಿಹಾರ, ಸಿನಿಮಾ, ಮಾತು ಮತ್ತು ಕಾಡುವ ಮೌನ, ಸುಮ್ಮಾನ.
K A Abbas- Pardesi

ಅಬ್ಬಾಸರ “ಪರದೇಶಿ” ಮುಗಿಯುವುದರೊಳಗಾಗಿ ಮುಜ್ಜಿಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯೊಂದು ಉಲ್ಭಣಿಸಿತು. ಹೀಗಾಗಿ ಅಬ್ಬಾಸ್ ಆಕೆಯ ಆರೈಕೆ ಮಾಡುತ್ತ ನಾಲ್ಕು ತಿಂಗಳು ಮಾಸ್ಕೋದಲ್ಲಿ ಉಳಿಯಬೇಕಾಗಿದ್ದರೂ ಅವಳೊಬ್ಬಳನ್ನೇ ಬಿಟ್ಟು ಭಾರತಕ್ಕೆ ಬಂದರು. ಪ್ರತಿಕ್ಷಣವೂ ವಿರಹದ ದೀರ್ಘ ಪ್ರವಾಸ. ನಾಲ್ಕು ತಿಂಗಳ ನಂತರ ಅವಳಿಗಾಗಿ ಕಾಯುತ್ತ ಗಾಲಿ ಖುರ್ಚಿಯನ್ನು ಹಿಡಿದುಕೊಂಡು ಅಬ್ಬಾಸ್ ಬಾಂಬೆ ಏರ್‌ಪೋರ್ಟ್‌ನಲ್ಲಿ ನಿಂತರು. ಮುಜ್ಜಿ ಬಂದಳು. ಆದರೆ ಪ್ರೇತಕಳೆ ಆಗಲೇ ಆಕೆಯ ಮುಖವನ್ನು ಆವರಿಸಿತ್ತು. ಜೋರಾಗಿ ನಗಲು ಯತ್ನಿಸಿದಳು. ಆದರೆ ಅಬ್ಬಾಸ್‌ರನ್ನು ತಬ್ಬಿ ಮೌನವಾದಳು. ಅಬ್ಬಾಸ್ ಮಾತ್ರ ಕಣ್ಣೀರ ಹೊಳೆಯಲ್ಲಿ ಕೈ ತಪ್ಪಿದ ಕೂಸಾದರು. ಮುಜ್ಜಿ ಅಬ್ಬಾಸ್‌ರನ್ನು ಸಮಾಧಾನಿಸುತ್ತ, ಗಾಲಿಖುರ್ಚಿಯನ್ನು ಧಿಕ್ಕರಿಸಿ ನಡೆಯುತ್ತ ಹೊರಬಂದರು.ಮುಜ್ಜಿಯ ಹೃದಯಕ್ಕೆ ರಕ್ತ ಪೂರೈಸುವ ಒಂದು ಮುಖ್ಯ ರಕ್ತನಾಳ ದಿನೆ ದಿನೆ ಸಂಕುಚಿತವಾಗುತ್ತ ಹೊರಟಿತ್ತು. ಸರಿಯಾಗಿ ರಕ್ತ ಸಂಚಲನವಾಗದೆ ಮುಜ್ಜಿ ದಿನೇ ದಿನೇ ಕರಗಿದ ಹಿಮಗಡ್ಡೆಯಾಗಲಾರಂಭಿಸಿದ್ದಳು. ಮಾತೂ ಬೇಸರವಾಗಲಾರಂಭಿಸಿತ್ತು ಆಕೆಗೆ. ಈಗ ಆಕೆಯ ವಯಸ್ಸು ಮೂವತ್ತೈದರ ಆಸುಪಾಸು ಅಷ್ಟೆ. ಮುಜ್ಜಿ ಪ್ರಯಾಸದೊಂದಿಗೆ ಮಾತಿಗಿಳಿದರು-
K A Abbas- Char dil Char Rahen
ಅಬ್ಬಾಸ್ ಸಾಹೇಬ, ನಾನಿಲ್ಲದ ಈ ನಾಲ್ಕು ತಿಂಗಳಲ್ಲಿ ಏನು ಮಾಡಿದಿರಿ?ಚಾರ್‌ದಿಲ್ ಚಾರ್ ರಾಹೇಂ ಕಾದಂಬರಿ ಬರೆದಿದ್ದೇನೆ”
ಹಾಗಿದ್ದರೆ ಅದನ್ನು ನೀವು ಇಲ್ಲಿ ನನಗೆ ಓದಲು ಕೊಟ್ಟು ಹೊರಗೆ ಹೋಗುವಿರಾ?ಅಂಥ ಸ್ಥಿತಿಯನ್ನು ಆಕೆ ೨೦೦ ಪುಟಗಳ ಆ ಕಾದಂಬರಿಯನ್ನು ಸಾಯಂಕಾಲವಾಗುತ್ತಲೇ ಓದಿ ಮುಗಿಸಿ, ಮೀನಾಕುಮಾರಿಯನ್ನು ಮುಖ್ಯ ಭೂಮಿಕೆಯಲ್ಲಿಟ್ಟು ಸಿನಿಮಾ ಮಾಡಲು ಸೂಚಿಸುತ್ತಾಳೆ. ಹೀಗೆ ಶಿಮ್ಮಿ, ಮೀನಾ, ರಾಜ್‌ಕಪೂರ್, ಕುಂಕುಂ ಹಾಗೂ ಅನ್ವರ್ ಹುಸೇನ್‌ರನ್ನು ಒಳಗೊಂಡ ಚಿತ್ರದ ಶೂಟಿಂಗ್ ಪ್ರಾರಂಭವಾಗುತ್ತದೆ. ಇತ್ತ ಮುಜ್ಜಿಯ ದೇಹ ಕಿದ್ವಾಯಿ ಆಸ್ಪತ್ರೆಯಿಂದ ಬಾಳಿಗಾ ಆಸ್ಪತ್ರೆ, ಕೊನೆಗೆ ಬಾಳಿಗಾ ದಿಂದ ಕೆಮ್ಮ ನಿರಂತರವಾಗಿ ಎತ್ತೊಯ್ಯಲ್ಪಡುತ್ತಿರುತ್ತದೆ.
 ಚಿತ್ರದ ಕೊನೆಯ ಭಾಗ. ರಾಜಕಪೂರ್ ಎತ್ತಿನ ಬಂಡಿಯಲ್ಲಿ ಹಾಡುತ್ತ ಸಾಗುವ ಒಂದು ದೃಶ್ಯ. ಈಗ ಷೂಟಿಂಗ್ ಬಾಂಬೆಯಿಂದ ಎಪ್ಪತ್ತು ಕಿಲೋಮೀಟರ್ ದೂರದ ಇಗತಾಪುರಿ ಎಂಬ ಹಳ್ಳಿಯಲ್ಲಿ. ಮುಜ್ಜಿ ಕೆಮ್ಮ ಆಸ್ಪತ್ರೆಯಲ್ಲಿ. ಅಬ್ಬಾಸ್ ನಿತ್ಯವೂ ಷೂಟಿಂಗ್ ಸ್ಪಾಟ್‌ದಿಂದ ಬಂದು ಮುಜ್ಜಿಗೆ ವರದಿ ಒಪ್ಪಿಸಬೇಕು. ಇಂದರ್ ಹಾಗೂ ಟೀನೂ ಆನಂದ, ಶ್ಯಾಂ ಹಾಗೂ ವ್ಹಿ. ಪಿ. ಸಾಠೆ ದಿನಾಲು ಆಕೆಯೊಂದಿಗೆ ಮಾತಾಡಲೇಬೇಕು. ಇದು ಒತ್ತಾಯವಲ್ಲ ಅನುರೋಧ. ಅಬ್ಬಾಸ್ ಪ್ರತಿ ಸಾಯಂಕಾಲವೂ ಹೇಳಬೇಕು- ನೀನು ಮಗುವಂತೆ ಮಲಗು”
ಮುಜ್ಜಿ ಹೇಳುತ್ತಾಳೆ-”ಅದೆಲ್ಲ ಅಬ್ಬಾಸ್ ಸಾಹೇಬ ಇಲ್ಲದಾಗ, ನಾನೀಗ ನಿಮ್ಮ ಹೆಂಡತಿ”ಬೊಂಬಾಯಿಯ ಕೆಮ್ ಆಸ್ಪತ್ರೆಯ ಡಾ||ಸೆನ್ ಮುಜ್ಜಿಯ ಆಪರೇಶನ್‌ಗೆ ಒಪ್ಪಿಕೊಂಡರು. ಇಂದರ್ ರಾಜ್ ಆನಂದ, ರಾಜಕಪೂರ್, ಮೀನಾಕುಮಾರಿ ಆರ್ಥಿಕ  ಸಹಾಯ ಮಾಡಿದರು. ಆಪರೇಶನ್‌ದ ದಿನ ಮುಜ್ಜಿಗೆ ಒಂದೇ ಒಂದು ಆಸೆ. ಆಕೆಯ ಪ್ರೀತಿಯ ಲೇಖಕ ರೋಮಾನ್ ರೋಲಾಂನ “ಜೀನ್ ಕ್ರಿಸ್ಟೋಪ್” ಕೃತಿ ಹಾಗೂ ಸ್ವಯಂ ಅಬ್ಬಾಸರ “ಔಟ್‌ಸೈಡ್‌ಇಂಡಿಯಾ” ಕೃತಿಗಳು ತನ್ನೊಂದಿಗಿರಬೇಕು ಎಂದು. ಆದರೆ ಕೃಶವಾದ ಮುಜ್ಜಿ ಸಾವಿರಾರು ಪುಟಗಳ “ಜೀನ್ ಕ್ರಿಸ್ಟೋಪ್” ಎತ್ತಿ ಓದುವುದು ಹೇಗೆ? ಅಬ್ಬಾಸ್ ಅದನ್ನು ಹರಿದು ಹತ್ತು ಚಿಕ್ಕ ಚಿಕ್ಕ ಪುಸ್ತಕಗಳಾಗಿ ಕಟ್ಟಿಸಿ ತಂದರು. ಬಂಧುಮಿತ್ರರು ಚಿತ್ರರಂಗದ ದಿಗ್ಗಜರು ಬರುವುದು ಹೋಗುವುದು ನಿರಂತರವಾಗಿತ್ತು. ಮುಜ್ಜಿ ಮನ ಮುರಿದ ಅಬ್ಬಾಸರನ್ನು ಮಾತಿಗೆಳೆದಳು-ಅಬ್ಬಾಸ್ ಸಾಹೇಬ, ಅಂತಿಮವಾಗಿ ನನಗೀ ಪುಸ್ತಕಗಳು ಓದಬೇಕಿದೆ. ನಿಮಗೂ ಗೊತ್ತಿರುವಂತೆ ಅನಂತರದ್ದು ದೀರ್ಘ, ಬಹುದೀರ್ಘ ಪ್ರಯಾಣ ಅಲ್ವೆ?ಅಬ್ಬಾಸ್ ಹೇಳಿದರು- ಪರೇಲದಲ್ಲಿಯ ನಮ್ಮ ಈ ಆಸ್ಪತ್ರೆಗೂ, ಜುಹೂದೊಳಗಿನ ನಮ್ಮ ಮನೆಗೂ ಹತ್ತೇ ಕಿಲೋಮೀಟರ್‌ಗಳ ದಾರಿ. ಇದರಲ್ಲಿ ದೀರ್ಘ ಏನು ಬಂತು?ಆಕೆ ಮುಗುಳ್ನಕ್ಕು ಇಷ್ಟೇ ಹೇಳಿದಳು"You know what I mean" ಅಬ್ಬಾಸ್ ಕಕ್ಕಬೇಕಿದ್ದ ಕಣ್ಣಿರಿಗೆ ಕರವಸ್ತ್ರದ ಸಹಾಯ ನೀಡಿದರು.
ಅತ್ಯಂತ ಸೂಕ್ಷ್ಮವಾಗಿದ್ದರೂ ಕೂಡಾ ಆಪರೇಷನ್ ಯಶಸ್ವಿಯಾಯಿತು. ಈ ಮಧ್ಯೆ ತಾನು ಆಪರೇಶನ್ ಬೆಡ್ ಮೇಲಿರುವಾಗ ತನಗಾಗಿ ಒಂದು ಪತ್ರ ಬರೆದುಕೊಂಡು ಬರಲು ಮುಜ್ಜಿ ಅಬ್ಬಾಸರಿಗೆ ಅನುರೋಧಿಸಿದ್ದಳು. ಬದುಕುಳಿದರೆ ಮೊದಲಿಗೆ ಅದನ್ನೇ ಓದುವ ಆಸೆ ಆಕೆಗೆ. ಅಬ್ಬಾಸ್ ಬರೆದಿದ್ದರು. “ಮುಜ್ಜಿ ನನ್ನ ಮಗುವೆ ನೀನು ಬದುಕಲೇ ಬೇಕು." You must live, live, LIVE!" ಅಬ್ಬಾಸ್ ಪತ್ರದೊಂದಿಗೆ ಓಡೋಡಿ ಬಂದರು. ಮುಜ್ಜಿಯನ್ನು ಬಿಗಿದಪ್ಪಿದರು. ಮತ್ತೆ ಆ ಬಾಹುಬಂಧನ ಸಡಿಲಾಗುವವರೆಗೆ. ಮುಜ್ಜಿ ಪತ್ರ ಓದಿ ಹೇಳಿದಳು. “Thank you for telling such beautiful lies, But I needed them.”
ನಾಲ್ಕನೆಯ ದಿನಕ್ಕೆ ಮುಜ್ಜಿ ಜನರಲ್ ವಾರ್ಡಿಗೆ ಸ್ಥಳಾಂತರ. ಆರನೆಯ ದಿನಕ್ಕೆ ಮೆಲ್ಲಗೆ ನಡೆದಾಡುವಿಕೆ. ಮರುಜನ್ಮದ ಅನುಭವ. ಎಲ್ಲವೂ ರಸಯಾತ್ರೆ ಮರುಜನ್ಮ ಎಂದ ಮೇಲೆ ಮರುನಾಮಕರಣವೂ ಬೇಕಲ್ಲ? ಅಬ್ಬಾಸ್ ಮುಜ್ಜಿಗೆ “Sonya” ಎಂದು ಪ್ರೀತಿಯ ಹೆಸರಿಟ್ಟರು. ಮುಜ್ಜಿಯ ಪ್ರೀತಿಯ ಗೆಳತಿ ಯಾರು- ಸುಲ್ತಾನಾ, ಶಕೀಲಾ ಮತ್ತು ಶ್ಯಾಂ. ಅಂತೆಯೆ ಅಬ್ಬಾಸ್ ಮುಜ್ಜಿಗೆ “Sonya ಎಂದು ಹೆಸರಿಟ್ಟು “Four Asses ಎಂದು ಛೇಡಿಸುತ್ತಿದ್ದರು.
ಮುಜ್ಜಿ ಎಂದರೆ ಮಾತು, ಮಾತು, ಮತ್ತೂ ಮಾತು. ಆಕೆ ಒಂದು ವಾರದಲ್ಲಿ ಇಡೀ ಆಸ್ಪತ್ರೆ ಜೀವ ಚೈತನ್ಯದಿಂದ ಪುಟಿಯುವಂತೆ ಮಾಡಿದಳು. ಕುಳಿತಲ್ಲಿ ನಿಂತಲ್ಲಿ ಜನರ, ಸಿಬ್ಬಂದಿಯವರ, ಎಳೆಯ ವೈದ್ಯರ ಸಮಸ್ಯೆಗಳನ್ನು ಆಲಿಸಿದಳು. ಸಲಹೆಗಳನ್ನು ನೀಡಿ ಹೋರಾಡುವ ಸ್ಫೂರ್ತಿ ನೀಡಿದಳು. ಮತ್ತೂ ಬಿಡುವಾದಾಗ ಛೌಲ್ ಗ್ಯಾಲಿಕೋಸ್‌ನ Snow Goose ಓದಿ ಕಥೆ ಮಾಡಿ ಹೇಳಿದಳು. ಆದರೆ ಬೆಂಕಿಯ ಸುತ್ತ ಹಾರಾಡುವ ಪತಂಗದ ಬದುಕು ಅದೆಷ್ಟು ಸುರಕ್ಷಿತ? ಬೇಲಿ ಮುಳ್ಳಿನ ಮೇಲಿನ ಹೂವಿನಂತಿತ್ತು ಮುಜ್ಜ್ಚಿಯ ಬದುಕು.
ಹೃದಯ ಚಿಕಿತ್ಸೆಯ ನಂತರ ಆಕೆಗೆ ಯಾವುದೇ ಕಾರಣಕ್ಕೂ ಜಿಟeತಿ ಆಗಬಾರದು ಎಂಬುದೇ ಅಲ್ಲಿಯ ವೈದ್ಯರ ಆತಂಕವಾಗಿತ್ತು. ಆದರೆ ಮುಜ್ಜಿಗೆ ಇದ್ದಕ್ಕಿದ್ದಂತೆ ಜ್ವರ, ಆನಂತರ ಪ್ಲೀವ್ಹ್ ಹಾಗೆಯೇ ರೋಗಗಳ ಸರಮಾಲೆ. ಆಕೆಗೆ ತಕ್ಷಣ Cortizone ಬೇಕಾಗಿತ್ತು. ಅದೊಂದೇ ಬದುಕುಳಿಸುವ ಔಷಧಿ. ಅಬ್ಬಾಸ ಅದನ್ನು ಹುಡುಕಾಡುತ್ತ ಬೊಂಬಾಯಿ ಸುತ್ತುವಾಗ ಮುಜ್ಜಿ ಮರಣದ ಮೌನ ಮನೆಯ ಕದ ತಟ್ಟಿದಳು. ಅಬ್ಬಾಸ ಮರಳಿ ಬರುವಷ್ಟರಲ್ಲಿ ಕೈ ಕೈ ಹಿಡಿದು ನೋವಲ್ಲಿ ನಲಿವಲ್ಲಿ ಜೊತೆ ಜೊತೆಯಾಗಿ ಮುವತ್ತೆರಡು ವರ್ಷ ಬದುಕಿದ್ದ ಮುಜ್ಜಿ ಮತ್ತೆ ಬಾರದ ಲೋಕಕ್ಕೆ ತೆರಳಿದ್ದಳು. ಮುಜ್ಜಿ ಬದುಕಿದ್ದ ೩೨ ವರ್ಷ ಅದರಲ್ಲಿ ಸಂಸಾರ ಕೇವಲ ೧೪ ವರ್ಷ.ಮುಜ್ಜಿಯನ್ನು ಮಣ್ಣಿಗಿಟ್ಟು ಬಂದ ಮರುದಿನ ಎಲ್ಲವೂ ಖಾಲಿ ಖಾಲಿಯಾಗಿತ್ತು. ಟೇಬಲ್ ಮೇಲೆ ಪೆನ್ನು ಒಂಟಿಯಾಗಿ ಬಿದ್ದುಕೊಂಡಿತ್ತು. ಸೋಮವಾರ ಹೊರಬರುವ Blitz ಪತ್ರಿಕೆಯ Last Page ಅಬ್ಬಾಸರಿಗಾಗಿ ಕಾಯುತ್ತಿತ್ತು. ಎದೆಯಲ್ಲಿ ಮಡುಗಟ್ಟಿದ್ದ ದುಃಖ ಹರಿಬಿಟ್ಟ ಅಬ್ಬಾಸ ಬರೆಯಲಾರಂಭಿಸಿದರು. Death, Be not Proud of Your victory “ಆರು ಅಡಿ ಆಳದಲ್ಲಿ, ನೆಲದಾಳದಲ್ಲಿ ಮುಜ್ಜಿ ಈಗ ಚಿರನಿದ್ರೆಯಲ್ಲಿ. ಒಪ್ಪುತ್ತೇನೆ. ಆದರೆ ಅದೇ ಅವಳ ಬದುಕಿನ ಅಂತ್ಯವೆ? ಅವಂ ಅದಮ್ಯ ಪ್ರೀತಿಗೆ, ಅವಳು ಬದುಕಿದ ಆ ಚೇತೋಹಾರಿ ಬದುಕಿಗೆ, ತಂಗಾಳಿಯಂತೆ ನನ್ನ ಬದುಕಿನಲ್ಲಿ ಜೋಲಾಡಿದ ರೀತಿಗೆ ಕಟ್ಟಿಟ್ಟ ಕನಸುಗಳಿಗೆ, ಇದೇ ಅಂತ್ಯವೆ? ಇದು, ಇದು ಬದುಕಿನ ಮೇಲೆ ಸಾವಿನ ವಿಜಯವೆ? “Was this the end of her, of all she was, of all she wanted to do and to be?’’ನನಗೆ ಪೂರ್ವಾಪರಗಳೆಂದರೆ ಏನು ಎಂದು ಗೊತ್ತಿಲ್ಲ. ಆತ್ಮ ಎಂದರೆ ಎಂಥದ್ದು, ಅದು ಅಮರವೆ? ಮರಣಾಧಿನವೆ? ಮರು ಜನ್ಮ ಎಂಬುದುಂಟೊ? ಇಲ್ಲವೊ ಅದೂ ನನಗೆ ತಿಳಿಯದು. ಆದರೆ ಒಂದು ಜೀವ ಅವಾ ಜೀವನ ಎಂದರೇನೇ ಅದು ಬದುಕಿದ ರೀತಿ, ಅದರ ಪರೋಪಕಾರದ ಬದುಕು ಹಾಗೂ ಬುದ್ಧಿವಂತಿಕೆ. ನಾನು ಈಗಲೂ ಹೇಳುತ್ತೇನೆ - ಪ್ರಪಂಚದಲ್ಲಿ ನಮಗೆ ನಮ್ಮ ದೇಹ, ಮನಸ್ಸು ಹಾಗೂ ಭಾವನೆಗಳನ್ನು ಬಿಟ್ಟು ಎಲ್ಲ ಗೊತ್ತಿದೆ. ನಮಗೆ ಎಲ್ಲ ಗೊತ್ತಿದೆ, ಆದರೆ ನಮ್ಮ ಮೆದುಳು ಕಾರ್ಯ ಮಾಡುವ ರೀತಿ, ಈ ನಮ್ಮ ಜೀವನವನ್ನೇ ಚೈತ್ರವಾಗಿಸುವ ನಮ್ಮ ಭಾವನೆಗಳು, ಕೈಹಿಡಿದು ದಡ ಸೇರಿಸುವ ಆಶೆಗಳು, ಹಠಗಳು, ನಮ್ಮ ದೇಹದ ಕಾರ್ಯ ವೈಖರಿ ಅದು ಮಾತ್ರ ನಮಗೆ ಗೊತ್ತಿಲ್ಲ.ಈ ಮೇಲಿನ ಅಂಶಗಳು ಗೊತ್ತಿರುವುದಾದರೆ ಇತಿಹಾಸ ಎನ್ನುವುದು ಬರೀ ದಾಳಿಕಾರರ, ಆಕ್ರಮಣಕಾರರ, ಸಂತರ, ದಾರ್ಶನಿಕರ, ಸಾಧಿಸಿದವರ ಸಂಗ್ರಹವಾಗುತ್ತಿರಲಿಲ್ಲ. ಅದು ಜಗದೊಂದಿಗೆ ಯಾವ ತಕರಾರೂ ಇಲ್ಲದೇ ದುಡಿಯುವ ರೈತನ, ನಿಮಗೆ ವಿಧೆಯಳಾಗಿ ಬಾಳಿನ ನೊಗವನ್ನು ಸಮ ಸಮನಾಗಿ ಹೊತ್ತು ಸಾಗುವ ನಿಮ್ಮ ಹೆಂಡತಿಯ ಅಮರ ಕಹಾನಿಯಾ ಆಗಿರುತ್ತಿತ್ತು. ಈ ಭೂಮಿ ಎನ್ನುವುದು ಬರೀ ಜಲಪಾತ, ಪ್ರಪಾತ, ಗಿರಿಶಿಖರ ಅಷ್ಟೇ ಅಲ್ಲ. ಇದು ಹುಡಿಹುಡಿಯಾದ ಹಿಡಿ ಮಣ್ಣು, ಮುಂಜಾನೆ ಕಣ್ಣರಳಿಸಿ ಮಧ್ಯಾನ್ಹ ಮುರುಟುವ ಹೂ, ಛೇಡಿಸುವ ಮುಳ್ಳು, ಮೈ ನವಿರೇಳಿಸುವ ಇಬ್ಬನಿ, ಹುಟ್ಟಿ ಸಾಯುವ ಹುಲ್ಲು. ಈ ಬದುಕು ಬರೀ ಅಬ್ಬಾಸರ ಕಥೆಯಲ್ಲ ಮುಜ್ಜಿಯ ಸವಿನೆನಪೂ ಕೂಡಾ. ನೀವು ಈ ಸಾಲುಗಳನ್ನು ಒಪ್ಪುವುದಾದರೆ-Mujji lives in the love of all those who lived her, in the lives that were influenced and even moulded by the gentle impact of her goodness, in the literary work that she did herself or that she inspired me to create, she lives in the minds of the students she taught, in the heart of hundereds of the needy and suffering whom she helped and served.ಮುಜ್ಜಿಯದು ಭೌತಿಕವಾಗಿ ಬದುಕಿ ತೀರುವ ಅಥವಾ ಬೌದ್ಧಿಕವಾಗಿ ಹೇಳಿ ಮುಗಿಸುವ ಜೀವನ ಎಂದು ಅಬ್ಬಾಸ ಎಂದೂ ಅಂದುಕೊಳ್ಳಲಿಲ್ಲ. ಅಂತೆಯೆ ಅಬ್ಬಾಸರ ಜೀವನ ಪ್ರವಾಹ ಅವಳ ನಂತರದ ದಿನಗಳಲ್ಲಿಯೂ ಅದೇ ಲವಲವಿಕೆಯಿಂದ ಮುಂದುವರಿಯಿತು.



No comments:

Post a Comment